Monday, October 18, 2010

ಕಷ್ಟವಿಲ್ಲದಿದ್ದರೆ ಖುಷಿ ಪಡಿ

ಆಫೀಸಿನಲ್ಲಿ ಬಹು ದಿನಗಳ ನಂತರ ಇಷ್ಟದ ಕೆಲಸ ಮಾಡುತ್ತಿದ್ದೆ. ನಾನು ಬರೆಯುತ್ತಿದ್ದ program ಗೆ ನಾನು ಬಳಸುತ್ತಿದ್ದ programming language ಬೇಕಾದಷ್ಟು API ಗಳನ್ನು ಕೊಟ್ಟು ನನ್ನ ಕೆಲಸ ಸುಲಭ ಮಾಡಿತ್ತು. (API = ನಾವು computer ಜೊತೆ ವ್ಯವಹರಿಸಲು ಸುಲಭವಾಗಲು ಅದಕ್ಕೆ ಸಂಬಂಧ ಪಟ್ಟ ಕೆಲವು ಸೂಚನೆಗಳು ಮೊದಲೇ ಲಭ್ಯವಿರುತ್ತವೆ. ನಾವು ಅದನ್ನು ಬಳಸಿ ಆ ಯಂತ್ರದ ಬಗೆ್ಗೆ ಬೇಕಾದ ಮಾಹಿತಿ ಪಡೆದು ನಮ್ಮ program ರಚಿಸಬಹುದು). ಹಾಗೇ ಟೈಪ್ ಮಾಡುತ್ತಾ "ಆಹಾ... ಇದರಲ್ಲಿ program ಬರೆಯುವುದೆಂದರೆ ಆಟವಾಡಿದಂತಾಗುತ್ತದೆ" ಎಂದು ಖುಷಿಯಿಂದ ಉದ್ಗರಿಸಿದೆ. ನನ್ನ ಪಕ್ಕ ಕುಳಿತಿದ್ದಾತ ಅದನ್ನು ಕೇಳಿ "ಹೌದೌದು... ನಿನ್ನ ಕೆಲಸ ಕಷ್ಟವಿಲ್ಲದೆ ನಡೆಯುತ್ತಿದ್ದರೆ ಖುಷಿ ಆಗದೆ ಇನ್ನೇನು" ಎಂದ. ನನಗೆ ನನ್ನ ಕೆಲಸ ಸುಲಭವಾಗಿದೆ ಎಂದು ಕೇಳಿದ ತಕ್ಷಣ ಮನಸಲ್ಲಿ ಸಿಟ್ಟು ಮಿಂಚಿದಂತಾಯಿತು. "ಯಾರು ಹೇಳಿದ್ದು? ತಾವು ಮಾಡುವ ಕೆಲಸ ಕಷ್ಟವೆಂದು ಬೇರೆಯವರದ್ದನ್ನು ಸುಲಭವೆನ್ನಬೇಕಿಲ್ಲ. ಎಲ್ಲರೂ ಅವರವರ ರೀತಿಯಲ್ಲಿ ಕಷ್ಟಪಡುತ್ತಾರೆ" ಎಂದೇನೋ ಹೇಳಿ ಸುಮ್ಮನಾದೆ. ಸಂಜೆ ಬಸ್ ನಲ್ಲಿ ಮನೆಗೆ ಹೋಗುವಾಗ ಬೆಳಗ್ಗಿನ ವಿಚಾರ ನೆನಪಿಗೆ ಬಂತು. ನನ್ನ ಕೆಲಸ ಸುಲಭವಿದೆ ಎಂದ ತಕ್ಷಣ ನನಗೆ ಸಿಟ್ಟು ಬಂದದ್ದು ಏಕೆ? ಕೆಲಸ ಸುಲಭವಿದೆ ಎಂದಾಗ ನನಗೆ ಕೀಳರಿಮೆಯೇಕೆ ಅನಿಸಿದೆ? ಕಷ್ಟವು ನನಗೆ ಇಷ್ಟವಾಗಿದೆಯೇ? ಕೆಲಸ ಸುಲಭವಾದರೆ ಸಂತೋಷವಾಗಬೇಕು ತಾನೇ? ಯೋಚನೆಗಳು ಸುಳಿದಾಡಿದವು.

ಏಳೆಂಟು ವರ್ಷಗಳ ಹಿಂದೆ ನಾನು engineering ವಿದ್ಯಾರ್ಥಿಯಾಗಿದ್ದೆ. ಆಗ ಅನೇಕರು electronics engineering ಬಲು ಕಷ್ಟ, civil engineering ಅಂತೂ ಕಬ್ಬಿಣದ ಕಡಲೆ, computer engineering ಸುಲಭ ಎಂದೆಲ್ಲ ತೋಚಿದಂತೆ ಮಾತನಾಡುತ್ತಿದ್ದರು. ನನಗೆ ಆಗ ಸಿಟ್ಟು ಬರುತ್ತಿತ್ತು. ನನ್ನಂತೆ ಅನೇಕ ಸಹಪಾಠಿಗಳಿಗೂ ಸಿಟ್ಟುಬರುತ್ತಿತ್ತು. ನಾವೆಲ್ಲ "computer engineering ಸುಲಭವಿಲ್ಲವೇ ಇಲ್ಲ" ಎಂದು ವಾದಕ್ಕಿಳಿಯುತ್ತಿದ್ದೆವು. ಸುಲಭವೆಂದರೆ ತೊಂದರೆಯೇನಿತ್ತು ಎಂದು ನನಗೆ ಈಗ ಅನಿಸುತ್ತದೆ. ಕಬ್ಬಿಣದ ಕಡಲೆ ಜಗಿದು ಹಲ್ಲು ಮುರಿದುಕೊಳ್ಳುವುದಕ್ಕಿಂತ ಬೆಣ್ಣೆ ಮೆಲ್ಲುವುದರಲ್ಲಿ smartness ಇಲ್ಲವೇ? ಕಷ್ಟದ ವಿಷಯ ಆರಿಸಿ ಸೋಲುವುದರಿಂದ ನಾನು ಪಾರಾಗಿದ್ದೇನೆ ಎಂಬುದನ್ನು ನಾನು ಜಾಣ್ಮೆಎಂದು ಪರಿಗಣಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ಆಶ್ಚರ್ಯಪಡುತ್ತೇನೆ.

ಬಹುಶಃ ನಮಗೆ ಕಷ್ಟ ಅನುಭವಿಸಲು ಇಷ್ಟವಿದೆ. ಕಷ್ಟ ಪಟ್ಟರೆ ನಾನು great ಆಗುತ್ತೇನೆ ಎಂಬ ಭಾವನೆ ಮನಸಿನೊಳಗೆಲ್ಲೋ ಬೇರೂರಿಬಿಟ್ಟಿದೆ. ಯಾಕೆ? ಹೇಗೆ? ಗೊತ್ತಿಲ್ಲ. ಹೆಚ್ಚಿನ ವ್ಯಕ್ತಿಗಳ ಮನದೊಳಗೆ ಅರಿವೇ ಇರದಂತೆ ಈ ಭಾವನೆ ಅಡಗಿ ಕೂತಿದೆ. ಅದಕ್ಕೇ ನಮಗೆ ಸಂತೋಷ ಅನುಭವಿಸಲು ಹಿಂಜರಿಯುವ ಜನರು ಕಾಣುತ್ತಾರೆ. ಅಂಗಡಿಯಲ್ಲಿ ಕಿಕ್ಕಿರಿದು ಗಿರಾಕಿಗಳು ತುಂಬಿದ್ದರೂ "ವ್ಯಾಪಾರ ಏನೂ ಚೆನ್ನಾಗಿಲ್ಲ" ಎಂದು ಸದಾ ಗೋಳಾಡುವ ವ್ಯಾಪಾರಿಗಳನ್ನು ನಾನು ನೋಡಿದ್ದೇನೆ. "ಕಷ್ಟ ಪಟ್ಟು" ಜೀವನದಲ್ಲಿ ಮೇಲೆ ಬಂದವನನ್ನು ಜನರು ನೋಡುವ ಪರಿಗೂ "ಕಷ್ಟ ಪಡದೆ" ಮೇಲೆ ಬಂದವನನ್ನು ನೋಡುವ ಪರಿಗೂ ಬಹಳ ವ್ಯತ್ಯಾಸ ಕಾಣುತ್ತದೆ. "ಪಾಪ ಕಷ್ಟದಲ್ಲಿದ್ದಾರೆ" ಎನ್ನುವಾಗ ಕನಿಕರ ಪಡುವ ಹೃದಯ ಸುಖದಲ್ಲಿದ್ದವರನ್ನು ಕಂಡಾಗ ಸಂತಸಪಡುವುದಿಲ್ಲ. ಬೀದಿ ದೀಪದಡಿ ಓದಿ ಡಿಗ್ರಿ ಪಡೆದವ IIMನಲ್ಲಿ MBA ಮಾಡಿದವನ ಮುಂದೆ star ಆಗಿ ಕಾಣುತ್ತಾನೆ. ಯಾಕೆ?

ನಮ್ಮ ಮಕ್ಕಳು ಕಷ್ಟಪಡುವ ಪರಿಸ್ಥಿತಿ ಬರಬಾರದೆಂದು ನಾವೆಲ್ಲರೂ ಬಯಸುತ್ತೇವೆ. ಮುಂದೆ ಕೆಲ ಸಂದರ್ಭಗಳಲ್ಲಿ ಇತರನ್ನು "ಕಷ್ಟಗಳು ಏನೆಂದೇ ಗೊತ್ತಿಲ್ಲ" ಎಂದು ಮೂದಲಿಸುತ್ತೇವೆ. ಆದರೆ ಕಷ್ಟಗಳು ಗೊತ್ತಾಗಬಾರದೆನ್ನುವುದು ನಮ್ಮದೂ ಬಯಕೆಯಾಗಿರಲಿಲ್ಲವೇ? ನಮ್ಮ ನೆಂಟರೊಬ್ಬರು "ನಮ್ಮ ಬಳಿ ಬೇಕಾದಷ್ಟು ಅನುಕೂಲ (ಹಣ) ಇದೆ." ಎಂದು ಹೇಳುತ್ತಿರುತ್ತಾರೆ. ಅವರನ್ನು ನೋಡಿದವರು ಮೆರೆದಾಟ, ಜಂಭ ಕೊಚ್ಚಿಕೊಳ್ಳುವುದು ಎಂದು ಭಾವಿಸುತ್ತಾರೆ. ಅದೇ ಎಷ್ಟೋ ಜನ "ನಾವು ಬಹಳ ಕಷ್ಟದಲ್ಲಿದ್ದೇವೆ" ಎಂದಾಗ ಕಷ್ಟವನ್ನು "ಕೊಚ್ಚಿಕೊಳ್ಳುವುದು" ಎಂದು ಭಾವಿಸುವುದೇ ಇಲ್ಲ. ಏಕೆಂದರೆ ಕಷ್ಟ ನಮಗೆಲ್ಲ ಬಲು ಪ್ರಿಯ. ನಮ್ಮದಾಗಲೀ ಇತರರದ್ದಾಗಲೀ ಕಷ್ಟವೆಂದರೆ ಎಲ್ಲರಿಗೂ ಇಷ್ಟ. ಕಷ್ಟ ಪಟ್ಟು ಪಡೆದುದರ ಬಗ್ಗೆ ಯಾವತ್ತೂ ಹೆಮ್ಮೆ. ಹಾಗಾದರೆ ನಾವು ಸುಖಪಡುವುದು ಯಾವಾಗ?

ಯೋಚನೆ ಓಡುತ್ತಿದ್ದರೆ ಬಸ್ ನಿಲ್ದಾಣ ಬಂತು. ನೂಕು ನುಗ್ಗಲನಲ್ಲಿ ಇನ್ನೊಂದು ಬಸ್ ಹತ್ತಿ ಕಷ್ಟಪಟ್ಟು... ಅಲ್ಲಲ್ಲ ಖುಷಿಯಿಂದಲೇ ಸೀಟು ಹಿಡಿದೆ. ಮನೆ ತಲುಪುವವರೆಗೆ ಪುನಃ ಯೋಚನೆಯಲ್ಲಿ ಮುಳುಗಿದೆ. ಕಷ್ಟವಾದರೇನು ಸುಲಭವಾದರೇನು? ನಾವು ಮಾಡುವ ಕೆಲಸ ನಮಗೆ ಖುಷಿ ಕೊಡಬೇಕು ಅನಿಸಿತು. ಆಗ ಅಲ್ಲಿ ಕಷ್ಟವಿದ್ದರೂ ಹಾಗೆ ಅನಿ್ನಸುವುದಿಲ್ಲ. ಕಷ್ಟದ ವೈಭವೀಕರಣವಾಗಲೀ, ಸುಲಭದಿಂದ ಪಡೆದುದರ ಬಗ್ಗೆ ಕೀಳರಿಮೆಯಾಗಲೀ ಅಲ್ಲಿ ಉಂಟಾಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾದುದು ಖುಷಿಯಲ್ಲವೇ? ಖುಷಿ ಸಿಕ್ಕಾಗ ಅನುಭವಿಸಲೇನು ಕಷ್ಟ?
-

Thursday, October 7, 2010

ನಾನು

ಈ ಬ್ಲಾಗು ಆರಂಭಿಸಿದಾಗ ನಾನು ಅನಾಮಿಕಳಾಗಿರಬೇಕೆಂದು ಬಯಸಿದ್ದೆ. ನನ್ನ ಬರಹಗಳಿಗೆ ಪ್ರತಿಕ್ರಿಯೆ ಬರೆಯುವವರು ನನ್ನ ಪರಿಚಿತರಾಗಿದ್ದರೆ ಪ್ರತಿಕ್ರಿಯೆ ಬೇರೆ ರೀತಿ ಇದ್ದೀತು ಎಂದು ಯೋಚಿಸಿದ್ದೆ. ನನ್ನ ಸಂಬಂಧಿಗಳಿಗೆ ನನ್ನ ಬರಹಗಳನ್ನು ಓದುವ ಅವಕಾಶವಿದ್ದರೆ ನಾನು ಬರಹಗಳಲ್ಲಿ ಜಾಗರೂಕತೆಯಿಂದ ವರ್ತಿಸಬೇಕಾದೀತೆಂದು ಹೆದರಿದ್ದೆ.
ಬ್ಲಾಗಿಗೆ ಮೂರು ವರುಷ ತುಂಬುವುದಕ್ಕೆ ಬಂದಿದೆ. ಈಗ ಅನೇಕ ಸಂಬಂಧಿಕರು, ಮಿತ್ರರು, ಪರಿಚಿತರು ಇದನ್ನು ಓದುತ್ತಾರೆ. ಜೊತೆಗೆ ಪರಿಚಿತರಲ್ಲದವರೂ ಓದಿ ಪ್ರತಿಕ್ರಿಯೆ ಬರೆದು ಪರಿಚಿತರಾಗಿದ್ದಾರೆ. ಬ್ಲಾಗು ನನ್ನದೆಂದು ಗೊತ್ತಾದ ಮೇಲೂ ಓದಲು ಆಸಕ್ತಿ ತೋರಿಸದ ಕೆಲ ಬಂಧುಗಳು ಇದ್ದಾರೆ. ಇಷ್ಟು ಸಮಯದ ನಂತರ ನಾನು ಅನಾಮಿಕಳಾಗಿರುವ ಬಯಕೆ ಅರ್ಥಹೀನವೆನಿಸುತ್ತದೆ.
ಹಾಗಾಗಿ ನನ್ನ ನಿಜ ಹೆಸರು ಹಾಕುತ್ತಿದ್ದೇನೆ. ನನ್ನ ಹೆಸರು ಸಿಂಧೂ. ಇತಿಹಾಸದಲ್ಲಿ ಅತ್ಯಂತ ಆಸಕ್ತಿ ಇರುವ ನನ್ನ ತಂದೆಯವರು ಪ್ರೀತಿಯಿಂದ ಆರಿಸಿದ ಹೆಸರು. ಹಾಗಾದರೆ ಚೈತ್ರಿಕಾ ಎಂಬ ಹೆಸರು ಎಲ್ಲಿಂದ ಸಿಕ್ಕಿತೆಂದು ಆಶ್ಚರ್ಯವೇ? ಅದೂ ನನ್ನದೇ ಹೆಸರು. ನನಗೆ ಇಡದ ಹೆಸರು. ಪೂಜೆ, ದೇವರ ಸಮಾರಂಭಗಳನ್ನು ನಡೆಸಿಕೊಡುವ ಭಟ್ಟರು ಸೂಚಿಸಿದ ಹೆಸರು ಅದು. ನನಗೆ ಚೈತ್ರಿಕಾಳಾಗಿಯೇ ಬ್ಲಾಗಿನಲ್ಲಿರಬೇಕೆಂಬ ಆಸೆಯಾದರೂ ನಿಜ ಹೆಸರು ಕಳೆದುಹೋದರೆ ಎಂದು ಒಮ್ಮೊಮ್ಮೆ ಅನಿಸಿದ್ದಕ್ಕೆ ಇಲ್ಲಿ ಬರೆದಿದ್ದೇನೆ. ನನ್ನ ಹೆಸರು ಏನೇ ಆದರೂ ಓದುವವರಿಗೆ ಅದು ಮುಖ್ಯವಲ್ಲ ಎಂದೂ ಭಾವಿಸಿದ್ದೇನೆ.
-

Monday, September 27, 2010

ಭಾನುವಾರದ ಟೈಂಪಾಸ್

ನಿನ್ನೆ ಭಾನುವಾರ ನನ್ನ ಅತ್ತಿಗೆ(ನಾದಿನಿ)ಗೆ ಒಂದು ಪರೀಕ್ಷೆ ಬರೆಯಲಿದ್ದ ಕಾರಣ ಅವರು ಪತಿ ಸಮೇತರಾಗಿ ಶನಿವಾರ ಮನೆಗೆ ಬಂದಿದ್ದರು. ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಹನ್ನೊಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ನಾವು ಒಂಭತ್ತು ಗಂಟೆಯೊಳಗಾಗಿ ಮನೆ ಬಿಡಬೇಕಿತ್ತು. ಏನೂ ಎಡವಟ್ಟಾಗದಂತೆ ಆರೂವರೆಗೆ ಎದ್ದ ನಾನು ಇಡ್ಲಿ ಬೇಯಲು ಇಟ್ಟು, ಸಾಂಬಾರಿಗೆ ತರಕಾರಿ ಬೇಯಲು ಇಟ್ಟು ಸುಮ್ಮನೆ ಕೂತೆ. ನಿದ್ದೆಯ ಜೊಂಪು ಹತ್ತಿತು. 5... 10... 15... 20... 30 ನಿಮಿಷ ಕಳೆದಾಗ ಕೃಷ್ಣನನ್ನು(ನನ್ನ ಪತಿ) ಸುಟ್ಟ ವಾಸನೆ ಬಡಿದೆಬ್ಬಿಸಿರಬೇಕು. "ಏ ಒಲೆಮೇಲೆ ಎಂತದ್ದು?" ಎಂದರು. ನಾನು ದಡಬಡ ಎದ್ದು ಓಡಿ ನೋಡಿದರೆ ತರಕಾರಿ ಸೀದು ತಳಕ್ಕಂಟಿದ್ದಲ್ಲದೆ ಪಾತ್ರೆಯ ತಳದಲ್ಲಿ ನೇರಳೆ ಬಣ್ಣದ ಶಾಶ್ವತ ಉಂಗುರ ಮೂಡಿತ್ತು. ಅತ್ತಿಗೆ ಮಾಡಿದ ಪುಣ್ಯವಿರಬೇಕು. ಇಡ್ಲಿ ಸರಿ ಇತ್ತು. ಪುನಃ ಹೊಸದಾಗಿ ಸಾಂಬಾರು ಮಾಡಿ ತಿಂದು ಒಂಭತ್ತು ಗಂಟೆಗೆ ಮನೆ ಬಿಟ್ಟೆವು.

ಹತ್ತು ಗಂಟೆಗೆ ಎಂ. ಎಸ್. ರಾಮಯ್ಯ ಕಾಲೇಜು ತಲುಪಿಯಾಗಿತ್ತು. ಪರೀಕ್ಷಾ ಕೊಠಡಿ ಹುಡುಕಿ ಅದರ ಮುಂದೆ ಕುಳಿತಿರಬೇಕಾದರೆ ಅತ್ತಿಗೆ ಪುಸ್ತಕ ತೆರೆದರು. ನನಗೆ ಮಾಡಲು ಕೆಲಸವಿಲ್ಲ. ಜನರನ್ನು ನೋಡುತ್ತಾ ಕುಳಿತೆ. ಒಂದು ಮಹಿಳಾ ಗುಂಪು ತಮಗೆ ತೋಚಿದ ಪ್ರಶ್ನೋತ್ತರಗಳ ಕೊಡು-ಪಡೆಯುವಿಕೆ ನಡೆಸಿತ್ತು. ಇನ್ನೊಬ್ಬಳು ತಾನು ಉರುಹೊಡೆದುದನ್ನು ಪುನಃ ಹೇಳಿಕೊಳ್ಳುತ್ತಿರುವಂತಿತ್ತು. ಆಕೆ ಶೂನ್ಯ ದೃಷ್ಟಿಯಲ್ಲಿ ಮಾಡಿನ (ಛಾವಣಿ) ಮೂಲೆಯನ್ನು ನೋಡುತ್ತಾ ಉರುಹೊಡೆಯುತ್ತಿದ್ದರೆ ಅಲ್ಲೇ ಉತ್ತರಗಳು ಕಂಡಂತಿತ್ತು. ಮತ್ತೊಬ್ಬಳು ಲಿಪ್ ಸ್ಟಿಕ್ ಹಾಕಿ ಸಂಪೂರ್ಣ ಮೇಕಪ್ಪಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದಳು. ಒಬ್ಬರ ತಲೆಕೂದಲು ನೆಟ್ಟಗೆ ನಿಮಿರಿ ಕೆದರಿಕೊಂಡು ಚಾರ್ಜ್ ಆದ ಹಾಗೆ ಕಾಣುತ್ತಿದ್ದರು. ನನಗೆ ಪುನಃ ನಿದ್ದೆಯ ಜೊಂಪು ಹತ್ತುತ್ತಲಿತ್ತು. ಅಷ್ಟರಲ್ಲಿ ಪರೀಕ್ಷೆ ಆರಂಭವಾಗುವ ಗಂಟೆಯಾಯಿತು. ನಾವು ಮೂವರು ಅತ್ತಿಗೆಯನ್ನು ಬಿಟ್ಟು ಹೊರಬಂದೆವು.

ಎರಡು ಗಂಟೆ ಕಾಲಹರಣ ಮಾಡಬೇಕಿತ್ತು. ಎಲ್ಲಿ ಹೋಗುವುದು ಎಂದುಕೊಂಡಾಗ ಮಂತ್ರಿ ಸ್ಕ್ವೇರ್ ನೆನಪಾಯಿತು. ಅಲ್ಲಿಗೆ ಹೋದೆವು. ಏನೂ ಕಲ್ಪನೆ ಹೊತ್ತು ಮಂತ್ರಿ ಹೊಕ್ಕ ನನಗೆ ಅಷ್ಟೇನೂ ವಿಶೇಷತೆ ಗೋಚರಿಸಲಿಲ್ಲ. ದೊಡ್ಡ ಕಟ್ಟಡದಲ್ಲಿ ತುಂಬಿದ ಅನೇಕಾನೇಕ ಅಂಗಡಿಗಳಂತೆ ಕಂಡಿತು. ಮಾಲ್ ಹೊಕ್ಕರೆ ಬೇಡದ ವಸ್ತುಗಳೂ ಅಗತ್ಯವೆನಿಸುತ್ತವೆ. ಸಧ್ಯಕ್ಕೆ ಒಂದು ಪೆನ್ ಡ್ರೈವ್ ಅತ್ಯಗತ್ಯ ವಸ್ತುವೆನಿಸಿತು. ಅದನ್ನು ಕೊಂಡಾಗುವಾಗ ಹೊಟ್ಟೆಯೊಳಗೆ ಹಸಿವು ಕುಣಿತ ಆರಂಭಿಸಿತು. ಅಲ್ಲೇ ಪಾನೀಯದ ಅಂಗಡಿ ಕಂಡಿತು. ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ರಾಸ್ಪ್ ಬೆರ್ರಿ smoothie ಹೇಳಿದೆವು. ಲೋಟಗಳು ಬಂದಾಗ ಎಲ್ಲ ಒಂದೇ ಬಣ್ಣ. ಬರೀ contrast ವ್ಯತ್ಯಾಸ ಅಷ್ಟೇ. ರುಚಿ? ಹುಳಿ ವ್ಯತ್ಯಾಸ ಅಷ್ಟೇ. ಹಲ್ಲು ಮುರಿಯುವಷ್ಟು ತಂಪು. ಕಾಲು ಲೀಟರು ಇದ್ದಿರಬಹುದು. 280 ರೂಪಾಯಿ ತೆತ್ತ ಕರ್ಮಕ್ಕೆ ಮುಗಿಸಬೇಕಾಯಿತು. ಲೋಟ ಅರ್ಧ ತುಂಬಿದೆ ಎಂದರೆ ಧನಾತ್ಮಕ ಚಿಂತನೆಯಂತೆ. ನಮಗಂತೂ "ಇನ್ನೂ ಅರ್ಧ ಬಾಕಿ ಇದೆ" ಎಂಬುದು ಋಣಾತ್ಮಕವೇ ಆಗಿತ್ತು. ಈ ಪೇಯಗಳು ಕೆಲವರಿಗೆ ಇಷ್ಟವಾದೀತೇನೋ. ನಾನು ಈ ವಿಷಯದಲ್ಲಿ ಹಿಂದುಳಿದ ವರ್ಗಕ್ಕೆ (ಕಾಲಮಾನದ ಪ್ರಕಾರ) ಸೇರಿದ್ದೇನೆ.

ಸಮಯ ಮೀರಲಾರಂಭಿಸಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ಎಂ. ಎಸ್. ರಾಮಯ್ಯ ತಲುಪಬೇಕಿತ್ತು. ಕೊನೆ ಮಹಡಿ ನೋಡಲಾಗಲಿಲ್ಲ. "ಮಂತ್ರಿ ಹೇಳುವಂಥಾ ವಿಶೇಷ ಕಾಣಲಿಲ್ಲ" ಎನ್ನುತ್ತಾ ನಾನು ಬರುತ್ತಿದ್ದರೆ parking area ದಲ್ಲಿ ಪೇಚಾಟಕ್ಕಿಟ್ಟುಕೊಂಡಿತು. parking ಚೀಟಿ ಕಾರಿನೊಳಗೇ ಉಳಿದಿತ್ತು. ನಿಲ್ಲಿಸಿದ ಜಾಗ ಎಷ್ಟು ಹುಡುಕಿದರೂ ಸಿಗದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನೋಡುತ್ತಿದ್ದರೆ ಕೃಷ್ಣ ನಾಪತ್ತೆ. ಅವನಿಗೆ ಫೋನ್ ಮಾಡಿದರೆ ನೆಟ್ ವರ್ಕ್ ಸಿಗದೆ call forward ಆಗಿ ನನ್ನ ಫೋನಿಗೇ ಬಂದು user busy ಎನ್ನುತ್ತಿತ್ತು. ಅಲ್ಲಿದ್ದ ಹಳದಿ ಸಮವಸ್ತ್ರಧಾರಿಯೊಬ್ಬನಲ್ಲಿ ಸಮಸ್ಯೆ ಹೇಳಿ ದಾರಿ ಕೇಳಿದೆವು. ಏನೋ ಒಂದು ಹೇಳಿ ಬೇರೆ ಕಡೆಗೆ ಹೋದ. ಅವನು ಹೇಳಿದ ಕಡೆ ಹೋದರೆ ಹೊರ ಹೋಗುವ ಮಾರ್ಗ ಕಂಡಿತು. ಸಿಟ್ಟು ಬಂದು ಬೈಯಬೇಕೆಸಿತು. ಆದರೆ ಅವನನ್ನೆಲ್ಲಿ ಹುಡುಕುವುದು? ಹತ್ತು ನಿಮಿಷ ಅಲೆದಾಡಿಯಾಗುವಾಗ ಕೃಷ್ಣ ನಡೆಯುತ್ತಿರುವುದು ಕಂಡಿತು. ಅತ್ತ ಓಡಿ ಇನ್ನೊಬ್ಬ ಹಳದಿ ಸಮವಸ್ತ್ರಧಾರಿಯನ್ನು ಸಹಾಯಮಾಡಲು ಕೇಳಿದೆವು. ಆತ ನಾವು ಬಂದ ಸಮಯ, ನಿಲ್ಲಿಸಿದ ಜಾಗದ ಅಕ್ಕ ಪಕ್ಕ ಏನಿತ್ತೆಂದು ಕೇಳಿ ಸರಿ ದಾರಿ ತೋರಿಸಿದ. ಸಧ್ಯ ಕಾರು ಸಿಕ್ಕಿತು. ಹೊರ ಬಂದಾಗ ಗಂಟೆ ಒಂದೂ ಕಾಲು ಆಗಿತ್ತು. ಎಂ. ಎಸ್. ರಾಮಯ್ಯ ತಲುಪಿದಾಗ ಅತ್ತಿಗೆ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಂತ್ರಿಯ parking areaದ ತಿರುಗಾಟದಲ್ಲಿ ಸಾಕು ಸಾಕಾಗಿತ್ತು. ಅತ್ತಿಗೆಯಲ್ಲಿ "ಮಂತ್ರಿ ಮಾಲ್ ಗೆ ಹೋಗಿದ್ದೆವು... parking lot ಸಿಕ್ಕಾಪಟ್ಟೆ ದೊಡ್ಡದಾಗಿದೆ" ಎಂದೆ.

ಅತ್ತಿಗೆ, ಅಣ್ಣ ಅಲ್ಲಿಂದಲೇ ತಮ್ಮ ಮನೆಗೆ ಹೊರಡಲನುವಾದರು. "ಸ್ವಲ್ಪ urgent ಇದೆ, ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತೇವೆ" ಎಂದರು. ನಾನು ಪುನಃ ತರಕಾರಿ, ಪಾತ್ರೆ ಸುಟ್ಟು ಹಾಕುವುದು ಬೇಡವೆಂದೋ ಏನೋ; ಗೊತ್ತಾಗಲಿಲ್ಲ. ನಮಗೆ ನನ್ನ ದೊಡ್ಡಮ್ಮನ ಮನೆಗೆ ಸಾಮಾನೊಂದನ್ನು ತಲುಪಿಸುವ ಕೆಲಸವಿತ್ತು. ಅಲ್ಲೇ ಊಟಕ್ಕೆ ಆಹ್ವಾನವೂ ಇತ್ತು. ಗಡದ್ದಾಗಿ ಬರ್ಫಿ, ದೊಣ್ಣೆ ಮೆಣಸಿನ (capsicum) ಭಾತ್, ಚಪಾತಿ, ಅಲೂ ಮಟರ್, ಅನ್ನ, ಸಾರಿನ ಊಟ ಮಾಡಿ ಮನೆಗೆ ಮರಳಿದೆವು.
-

Thursday, September 16, 2010

"Ladies seat" ನಿಂದ ಚಿಂತನಾಲಹರಿ...

ದಿನವೂ ಬಸ್ಸಿನಲ್ಲಿ ಕನಿಷ್ಟ ಎರಡು ಗಂಟೆ ಪ್ರಯಾಣಿಸುವ ನನ್ನನ್ನು "ಮಹಿಳೆಯರಿಗೆ" ಎಂದು ಬರೆದ ಫಲಕ ಆಗಾಗ ಚಿಂತನೆಗೆ ಹಚ್ಚುತ್ತದೆ. ನಮ್ಮೂರ ಕಡೆ (ದಕ್ಷಿಣ ಕನ್ನಡ) ಖಾಸಗಿ ಬಸ್ಸುಗಳೇ ಹೆಚ್ಚಾಗಿದ್ದು ಅಲ್ಲಿ ಈ Ladies seat ಫಲಕ ಅಷ್ಟಾಗಿ ಪ್ರಾಮುಖ್ಯ ಪಡೆದಿಲ್ಲ. ಕತ್ತಲ ವೇಳೆ ಪ್ರಯಾಣಿಸುತ್ತಿದ್ದಲ್ಲಿ ಅಥವಾ ಬೆರಳೆಣಿಕೆಯಷ್ಟೇ ಮಹಿಳೆಯರಿದ್ದರೆ ಈ ಸೀಟನ್ನು "ಕೇಳಿ ಪಡೆಯುವ" ಪ್ರಯತ್ನ ನಡೆಯುತ್ತದೆ. ಬೆಂಗಳೂರಲ್ಲಿ ಇದಕ್ಕೆ ವಿರುದ್ಧವಾದ ಪದ್ಧತಿ ಇರುವುದರಿಂದ ಮೊದಮೊದಲು ನನಗೆ ವಿಚಿತ್ರವೆನಿಸಿದ್ದು ಸಹಜ.

ಬೆಂಗಳೂರಿನಲ್ಲಿ ನಾನು ನೋಡಿದಂತೆ ಈ ಮಹಿಳಾ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವನ್ನು ಅನೇಕ ಮಹಿಳೆಯರು "ಹಕ್ಕು" ಎಂದು ಭಾವಿಸುವುದು ವಿಚಿತ್ರವೆನಿಸುತ್ತದೆ. ಹಲವರು ಸ್ವಲ್ಪವೂ ಸೌಜನ್ಯವಿಲ್ಲದಂತೆ "ಎದ್ದೇಳ್ರೀ... ಲೇಡೀಸ್ ಸೀಟೂ" ಎಂದು ದೊಡ್ಡ ಸ್ವರದಲ್ಲಿ ಹೇಳುವುದನ್ನು ನಾನು ಕೇಳಿದ್ದೇನೆ. ಬೆಂಗಳೂರಿಗೆ ಹೊಸಬಳಾಗಿದ್ದಾಗ ಸೀಟು ಬಿಟ್ಟುಕೊಟ್ಟವರಿಗೆ thanks ಹೇಳಿ ಅಕ್ಕ ಪಕ್ಕದವರಿಂದ ವಿಚಿತ್ರವಾಗಿ ನೋಡಿಸಿಕೊಂಡಿದ್ದೇನೆ. ಎಷ್ಟೋ ಸಲ ವಯಸ್ಸಾದವರನ್ನು, ಮುದುಕರನ್ನು "ಎದ್ದೇಳಿ" ಎಂದು ಚಿಕ್ಕ ಪ್ರಾಯದ, ಕೈ-ಕಾಲು ಗಟ್ಟಿ ಇರುವ ಹೆಂಗಸರು ತಮ್ಮ ಆರಾಮಕ್ಕೋಸ್ಕರ ಎಬ್ಬಿಸುವುದನ್ನು ನೋಡಿ ಮುಜುಗರ ಪಟ್ಟಿದ್ದೇನೆ. ಮಗು ಎತ್ತಿಕೊಂಡವರಿಗೂ ಜಾಗ ಕೊಡದೆ, ಕೆಲವರು ಮಗುವನ್ನು ತಾವೇ ಕೂರಿಸಿಕೊಳ್ಳುವ ಧಾರಾಳತನ ತೋರಿದ್ದನ್ನು ನೋಡಿದ್ದೇನೆ. ಇಷ್ಟೆಲ್ಲ ಆದಮೇಲೆ ನಿಜವಾಗಿ Ladies seat ಮೀಸಲಿಟ್ಟ ಉದ್ದೇಶವೇನು ಎಂಬ ಪ್ರಶ್ನೆ ಆಗಾಗ ಕಾಡಿದೆ. ಇದೇ ಪ್ರಶ್ನೆ ಪುನಃ ಕೇಳಿಕೊಳ್ಳುವ ಪ್ರಸಂಗ ನಿನ್ನೆ ಒದಗಿತು.
ನಾನು ಕೂತಿದ್ದ ಮೀಸಲಾತಿ ಸೀಟಿನ ಹಿಂದೆ ಕುಳಿತ ಸುಮಾರು ಐವತ್ತು ವರ್ಷ ಪ್ರಾಯದ ವ್ಯಕ್ತಿ ನಮ್ಮ ಸೀಟಿನ ನಡುವೆ ಕೈ ತೂರಿಸುವಂತಹ ಕೀಳು ಮಟ್ಟದ ಚೇಷ್ಟೆ ಮಾಡುತ್ತಿದ್ದ. ಎರಡು ಬಾರಿ ಬೈಸಿಕೊಂಡರೂ ಹಲ್ಲು ಕಿರಿತವೇ ಅವನ ಉತ್ತರ! ಮರುಕಳಿಸುವ ಉಪಟಳ! conductor ಸೇರಿದಂತೆ ಒಂದು ನರಪಿಳ್ಳೆಯೂ ಆತನಿಗೆ ಏನೂ ಅನ್ನಲಿಲ್ಲ. Ladies seat ನಲ್ಲಿ ಕೂತರೆ ಹೆಚ್ಚಿನ safety ಅಂತಾರೆಯೇ?

"Ladies" ಬೋರ್ಡ್ ಕಂಡಾಗ ನನ್ನ ಹಳೆಯ ಸಹೋದ್ಯೋಗಿಯೊಡನೆ ನಡೆದ ವಾಗ್ವಾದ ನೆನಪಾಗುತ್ತದೆ. ನಾನು ಸ್ತ್ರೀ ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ಯಾವತ್ತೂ ಆಸಕ್ತಿ ತೋರಿದ್ದಿಲ್ಲ. ಎಲ್ಲರೂ ಮನುಷ್ಯರು. ಕೆಲವರು ಪ್ರತಿಭಾವಂತರು, ಕೆಲವರು ತೀಕ್ಷ್ಣಮತಿಗಳು. ಕೆಲವರು ಬೇಜವಾಬ್ದಾರರು. ಇನ್ನು ಕೆಲವರು ಬೇಕಾಬಿಟ್ಟಿ ಬದುಕುವವರು. ಈ ಗುಣವಿಶೇಷಣಗಳಿಗೆ ಸ್ತ್ರೀ ಪುರುಷ ಭೇದವಿಲ್ಲ. ಅವಕಾಶ ವಂಚಿತರು, ಶೋಷಿತರು, ಕೆಲಸದ ಹೊರೆ ಹೊತ್ತವರು ಎಲ್ಲರಲ್ಲಿ ಇದ್ದಾರೆ. ಭೇದ ಮಾಡಲು ಇವೇನು ಬೇರೆ ಬೇರೆ ಪಂಗಡಗಳಲ್ಲ. co-operation, co-ordination ನಿಂದ ಬದುಕಬೇಕಾದವರು. ಇದು ನನ್ನ ಅನಿಸಿಕೆ. ಸ್ತ್ರೀ ಪುರುಷರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ವಾದವನ್ನು ನನಗೆ ಕೇಳಿದರಾಗದು. ಇಂಥದ್ದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ವಾದಕ್ಕಿಳಿದರು.
"ಎಲ್ಲರೂ ಸಮಾನರೆಂದು ತಿಳಿಯುವುದಾದರೆ ಬಸ್ ಗಳಲ್ಲಿ Ladies seat ಇರುವುದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ?"
"ಇಲ್ಲಿ ಸಮಾನತೆಯ ಪ್ರಶ್ನೆಯಿಲ್ಲ. ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸುವ ಕೆಲವು ಮಂದಿ ಇರುತ್ತಾರೆ. ಅದಲ್ಲದೆ ಹೆಚ್ಚಾಗಿ ಮಹಿಳೆಯರಿಗೂ ಪುರುಷರಿಗೂ ಗುಂಪಿನಲ್ಲಿ ನಿಲ್ಲಲು ಅನನುಕೂಲವೆನಿಸುತ್ತದೆ. ಇದು ಅವರವರ ಪ್ರಾಕೃತಿಕ ಸ್ವಭಾವವಿರಬಹುದು. ಅಂತಹ ಸಂದರ್ಭಗಳನ್ನು ಕಡಿಮೆ ಮಾಡಲು ಸೀಟುಗಳನ್ನು ಮೀಸಲಿಟ್ಟಿರಬೇಕು" ಎಂದೆ.
ಆತ ನನ್ನ ವಾದವನ್ನು ಒಪ್ಪಲೇ ಇಲ್ಲವೆನ್ನುವುದು ಬೇರೆ ವಿಚಾರ.
ಅದೇ ಸಹೋದ್ಯೋಗಿಗೆ ಬಸ್ ಗಳಲ್ಲಿ ನಡೆಯುವ ಅಸಭ್ಯ ವರ್ತನೆಗಳನ್ನು ಹೇಳಿದಾಗ "ಮೀಸಲಿಟ್ಟ ಸೀಟು ಬಿಟ್ಟು ಬೇರೆಡೆ ಕೂತರೆ ಇಂತಹವು ಅನಿವಾರ್ಯ" ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದ್ದರು.

ಈ ರೀತಿಯ ಮೀಸಲಾತಿಗಳಿಗೂ ಸಮಾನತೆ ಯಾ ಏಳಿಗೆಗೂ ನನಗೆ ಯಾವ ಸಂಬಂಧವೂ ಕಂಡುಬರುತ್ತಿಲ್ಲ.
Ladies seat ಮೇಲೆ ಹಕ್ಕು ಚಲಾಯಿಸಿದಂತೆ ಇನ್ನೂ ಕೆಲವೆಡೆ ಕೆಲವು ಮಹಿಳೆಯರು advantage ತೆಗೆದುಕೊಳ್ಳುವುದನ್ನು ನಾನ ಕಂಡಿದ್ದೇನೆ. ಊಟಕ್ಕೆ ಕಾದು ನಿಂತ ದೊಡ್ಡ ಸಾಲಿನಲ್ಲಿ "Ladies first" ಎಂದು ನಗುತ್ತಾ ಮುಂದೆ ಸೇರಿಕೊಳ್ಳುವವರನ್ನು ನೋಡಿದ್ದೇನೆ. ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಇಂತಹ ಸಂದರ್ಭಗಳನ್ನು ನೋಡಿ ಅನೇಕರು ಈ ನಡತೆಗಳನ್ನು ಸಾರ್ವತ್ರಿಕ ಎಂದು ಪರಿಗಣಿಸುತ್ತಾರೆ. Generalise ಮಾಡುತ್ತಾರೆ. ರಾತ್ರಿ ತಡವಾಗಿ ಆಫೀಸು ಬಿಡಲು ಬಯಸದ ಮಹಿಳೆಯರನ್ನು, ಬಸ್ ಗಳಲ್ಲಿ ಕಿರುಕುಳ ಅನುಭವಿಸುವವರನ್ನು ಸಮಾನತೆ, ಮೀಸಲಾತಿಗಳ ನೆಲೆಯಲ್ಲಿ ಪ್ರಶ್ನಿಸುತ್ತಾರೆ. biological differences ಅನ್ನು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಮಾನತೆ ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬಾರದು. ಇಲ್ಲಿ ಬದಲಾಗಬೇಕಿರುವುದು ಜನರ (ಮಹಿಳೆಯರೂ ಸೇರಿದಂತೆ) ದೃಷ್ಟಿಕೋನ. ಅಲ್ಲಿವರೆಗೆ Ladies seat ಆಗಲೀ ಮೀಸಲಾತಿ ಇರುವ ಯಾವುದೇ ಕ್ಷೇತ್ರವಾಗಲೀ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ.
-

Wednesday, July 28, 2010

ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...

(ಇದೊಂದು ಸ್ವಗತ. ಬರಹ ರೂಪದಲ್ಲಿ ಹಾಕೋಣ ಎನಿಸಿತು. ಇಲ್ಲಿ ಹಾಕಿದ್ದೇನೆ)

"ಸಂಸ್ಕೃತಿ" ಎಂದರೇನು? ಈ ಪ್ರಶ್ನೆ ಯಾವತ್ತೂ ನನನ್ನು ಕಾಡಿರಲಿಲ್ಲ. ಆಗ ನಾನು ಪಿ.ಯು.ಸಿ ಓದುತ್ತಿದ್ದೆ. ನಾನು ಆರಿಸಿಕೊಂಡ ಭಾಷೆ ಕನ್ನಡವಾಗಿತ್ತು. ಒಂದು ದಿನ ನಮಗೆ ಕನ್ನಡ ಕಲಿಸುತ್ತಿದ್ದ ಮೀನಾಕ್ಷಿ ಮೇಡಮ್ ಕಾ್ಲಸ್ ನಲ್ಲಿ ಒಂದು ಪ್ರಶ್ನೆ ಕೇಳಿದರು. "ಸಂಸ್ಕೃತಿ ಎಂದರೇನು?". ಕೆಲ ಕ್ಷಣಗಳ ಮೌನದ ನಂತರ ಕೆಲವು ಧ್ವನಿಗಳು ಕೇಳಿದವು. "ಮೇಡಮ್ ಬಳೆ ಹಾಕಿಕೊಳ್ಲೂದೂ..., ಬೊಟ್ಟು ಹಾಕಿಕೊಳ್ಳೂದೂ..." ,
"ಮೇಡಮ್ ಹೂವು, ಸೀರೇ..."
"ಕುಂಕುಮಾ...."
ಮೇಡಮ್ ನಕ್ಕರು. "ಸಂಸ್ಕೃತಿ ಎಂದರೆ ಅಷ್ಟೇಯಾ?... ಬಳೆ, ಬೊಟ್ಟು, ಹೂವು, ಸೀರೆ... ಹೂಮ್?" ಎಂದರು.
ಯಾರೂ ಮಾತನಾಡಲಿಲ್ಲ. "ಏನು ಸಂಸ್ಕೃತಿ ಎಂದರೆ?" ಇನ್ನೊಮ್ಮೆ ಕೂಗಿದರು. ಎಲ್ಲರೂ ಮೌನ. ಒಮ್ಮೆ ಮುಗುಳ್ನಕ್ಕು ಪಾಠ ಮುಂದುವರಿಸಿದರು. ನಾವು ಉತ್ತರಕ್ಕಾಗು ಕಾದೆವು. ಮೇಡಮ್ ಮಾತ್ರ ಅಂದು ಉತ್ತರ ಹೇಳಲೇ ಇಲ್ಲ. ಆದರೆ ನನ್ನ ತಲೆಯೊಳಗೆ ಆ ದಿನ ಅವರು ಹುಳ ಬಿಟ್ಟರು.
ನಾನು ಅನೇಕ ಬಾರಿ ಈ ಸಂದರ್ಭ ನೆನಪಾದಾಗ ಉತ್ತರ ಹುಡುಕಲು ಪ್ರಯತ್ನಿಸಿದೆ. ಈಗಲೂ ಹುಡುಕುತ್ತಿದ್ದೇನೆ. ಸರಿಯಾದ ಉತ್ತರ ಸಿಕ್ಕಿರದಿದ್ದರೂ ಕೆಲವು ಸಂಸ್ಕೃತಿಯ ತುಣುಕುಗಳು ಕಾಣಸಿಕ್ಕಿವೆ. ಆಗೆಲ್ಲ ಇದೇ "ಸಂಸ್ಕೃತಿ" ಇರಬೇಕು ಎಂದುಕೊಂಡು ಆ ತುಣುಕುಗಳನ್ನು ಆಯ್ದಿಡುತ್ತಿದ್ದೇನೆ.

1. ನಾವು ಚಿತ್ರದುರ್ಗಕ್ಕೆ ಹೊರಟ ದಿನ.
ಮೈಸೂರಿಂದ ಚಿಕ್ಕನಾಯಕನ ಹಳ್ಳಿ ತಲುಪಿದಾಗ ಎಲ್ಲರ ಹೊಟ್ಟೆಯೂ ಚುರುಗುಟ್ಟುತ್ತಿತ್ತು. ಈ ದಾರಿಯಲ್ಲಿ ಎಲ್ಲೂ ಸರಿಯಾದ ಹೋಟೆಲ್ ಗಳಿಲ್ಲ. ಚೆನ್ನಾಗಿರುವ Toilet ಇರುವ ಹೋಟೆಲ್ ಹುಡುಕುತ್ತ ಸಾಗಿದ್ದ ನಮಗೆ ಒಂದೂ ಹೋಟೆಲ್ ಸಿಗದ ಪರಿಸ್ಥಿತಿ ಎದುರಾಗಿತ್ತು. ಕೊನೆಗೆ ಚಿಕ್ಕನಾಯಕನ ಹಳ್ಳಿಯಲ್ಲಿ ಸುಮುಖ ರಿಫ್ರೆಶ್ ಮೆಂಟ್ಸ್ ಎಂಬ ಚಿಕ್ಕ ಹೋಟೆಲ್ ನಲ್ಲಿ ತಿಂಡಿತಿನ್ನಲು ಹೋದೆವು. ಅಲ್ಲಿಯ ಮಾಲಕನಲ್ಲಿ "ಈ ಪಕ್ಕದ ಮನೆ ನಿಮ್ಮದೇ?" ಎಂದಾಗ Toilet ಹುಡುಕುತ್ತಿದ್ದ ನಮ್ಮ ಸಮಸ್ಯೆ ಅವರಿಗೆ ಅರಿವಾಯಿತು. ಅವರು ತಕ್ಷಣ ಮುಂದೆ ಇದ್ದ ತಮ್ಮ ಮನೆಗೆ ಕರೆದೊಯ್ದು ಅವರ ಹೆಂಡತಿಯಲ್ಲಿ ಏನೋ ಹೇಳಿ ಹೋದರು. ಅವರ ಹೆಂಡತಿ ನಮಗೆ ಮುಖ-ಕೈ-ಕಾಲು ತೊಳೆದು ಫ್ರೆಶ್ ಆಗಲು ಬಿಸಿಬಿಸಿ ನೀರು ಕೊಟ್ಟರು. ಅದಲ್ಲದೆ ಒರೆಸಿಕೊಳ್ಳಲು ಬಟ್ಟೆ ಬೇರೆ. ಯಾರೆಂದೇ ಅರಿಯದ ಮನುಷ್ಯರನ್ನು ನಂಬಿಕೆಯಲ್ಲಿ ಮನೆಯೊಳಗೆ ಬರಲು ಬಿಟ್ಟು, ಚೆನ್ನಾಗಿ ಮಾತನಾಡಿಸಿ, ಉಪಚರಿಸಿ ಕಳುಹಿಸಿದ ಅವರು ಎಷ್ಟು ಸಹೃದಯಿಗಳು ಎಂದುಕೊಳ್ಳುತ್ತಾ ಹೊರಟೆವು. ಅವರಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

2. ನಮ್ಮ ಪರಿಚಯದವರೊಬ್ಬರು ತಮ್ಮ ಕುಟುಂಬದ ಜೊತೆ ನೆಂಟರಿಷ್ಟರ ಊರಿಗೆ ಹೋಗಿದ್ದರು. ಅಲ್ಲಿ ಒಂದೆರಡು ಮನೆಗಳಿಗೆ ಹೋಗಿ ಮಾತನಾಡಿ, ಊಟ ಮಾಡಿದ ನಂತರ ನಿದ್ದೆ ಮಾಡಲು ಇನ್ನೊಬ್ಬರ ಮನೆಗೆ ಹೊರಟರು. ಕೊನೆ ಗಳಿಗೆಯಲ್ಲಿ ಫೋನ್ ಮಾಡಿ ತಾವು ಬರುತ್ತಿರುವುದನ್ನು ಹೇಳಿದ ನಮ್ಮ ಈ ನೆಂಟರಿಗೆ ಆ ಕಡೆಯಿಂದ ಸಿಕ್ಕಿದ ಪ್ರತಿಕ್ರಿಯೆ ಏನೂ ಆಶಾದಾಯಕವಾಗಿರಲಿಲ್ಲ. ರಾತ್ರಿಯಾಗಿದ್ದಲ್ಲದೆ ಮಳೆ ಬರುತ್ತಿದ್ದ ಕಾರಣ ಬೇರೆ ಕಡೆತಂಗಲು ವ್ಯವಸ್ಥೆ ಸಿಗದಿದ್ದರೆ ಗೆಸ್ಟ್ ಹೌಸ್ ನೋಡಬೇಕಾದೀತೆಂದು ಯೋಚನೆ ಮಾಡತೊಡಗಿದರು. ಕೊನೆಯದಾಗಿ ಅವರ ಪತ್ನಿ ತಮ್ಮ ಅಣ್ಣನ ಮಗಳಿಗೆ ಹಿಂಜರಿಯುತ್ತಲೇ ಫೋನ್ ಮಾಡಿದರು. ಅವಳು ಸಂತಸದಿಂದ ಬರಹೇಳಿದ್ದಲ್ಲದೆ, ಅವಳು ಮತ್ತು ಅವಳ ಪತಿ ನಮ್ಮ ನೆಂಟರು ತಲುಪುವ ಮೊದಲೇ ಚಾಪೆ ಹಾಸಿ ಮಲಗಲು ವ್ಯವಸ್ಥೆಮಾಡಿದರಂತೆ. ಊಟಕ್ಕೇ ಬರಬೇಕಿತ್ತು ಎಂದರಂತೆ. ಅವಳ ನಡತೆಯಲ್ಲಿ ಅಂದು ಕಂಡ ಸಂಸ್ಕೃತಿಯ ತುಣುಕನ್ನು ನಾನು ಆಯ್ದುಕೊಂಡೆ.

3. ನಾನು ಬಾಳಸಂಗಾತಿಯನ್ನು ಆರಿಸ ಹೊರಟ ಸಂದರ್ಭ.
ಹುಡುಗನ ಮನೆ ಮೈಸೂರು. ಅದು ನನ್ನ ಆಪ್ತ ಬಂಧುಗಳೂ ಇರುವ ಊರು. ಏನೂ ನಿರ್ಧಾರವಾಗದೆ ಎಲ್ಲರಿಗೂ ಪ್ರಚಾರ ಮಾಡಲಿಚ್ಛಿಸದ ನನ್ನ ಅಪ್ಪ, ಅಮ್ಮ ಮೈಸೂರಿಗೆ ನಾವೇ ಹೋಗಿ ನನ್ನ ಸೋದರ ಮಾವನ ಮನೆಯಲ್ಲಿ ಹುಡುಗಿ-ಹುಡುಗ ನೋಡುವ ಕಾರ್ಯಕ್ರಮ ಇಟ್ಟುಕೊಳ್ಳುವುದು ಉತ್ತಮವೆಂದು ಮನಗಂಡರು. ನನ್ನ ಅಮ್ಮ ಸಿಹಿ ತಿಂಡಿ (ಹುಡುಗ ಮತ್ತು ಮನೆಯವರಿಗೆ ತಿನ್ನಲು ಕೊಡಬೇಕಲ್ಲವೇ?) ಮನೆಯಲ್ಲೇ ಮಾಡಿ ಕೊಂಡೊಯ್ಯುವುದೆಂದು ನಿರ್ಧರಿಸಿದರು. ಹಾಗೇ ಸಿಹಿ, ಖಾರ ಮನೆಯಲ್ಲೇ ಮಾಡಿ ತೆಗೆದುಕೊಂಡು ಹೋದೆವು. ಅಲ್ಲಿ ತಲುಪಿದಾಗ ನಮಗೆ ಆಶ್ಚರ್ಯ ಕಾದಿತ್ತು. ನನ್ನ ಅತ್ತೆ (ಸೋದರ ಮಾವನ ಮಡದಿ) ತಾವೇ ಉತ್ಸಾಹದಲ್ಲಿ ಸಿಹಿತಿಂಡಿ ತಯಾರಿಸಿದ್ದರು. ಅಲ್ಲದೇ ತಮ್ಮಿಂದ ಏನೂ ಕುಂದುಂಟಾಗದಂತೆ ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಕಿಟಕಿಯ ಪರದೆಗಳು, ಸೋಫಾದ ಹೊದಿಕೆಗಳು ಇತ್ಯಾದಿಗಳನ್ನು ಒಗೆದು ಹಾಕಿದ್ದರು. ತಮ್ಮದೇ ಮನೆಯ ಶುಭಕಾರ್ಯದಂತೆ ಸಹಕರಿಸಿದ್ದರು. ಅವರ ಈ ನಡತೆ ನಮಗೆ ಬಹಳ ಖುಷಿಕೊಟ್ಟಿತು. ನಮ್ಮೊಡನೆ ಬೆರೆತು, ಸಹಕರಿಸಿ, ಆನಂದಿಸಿದ ಅವರಲ್ಲಿ ನಾನು ಸಂಸ್ಕೃತಿಯ ತುಣುಕೊಂದನ್ನು ಆಯ್ದುಕೊಂಡೆ.

4. ನನ್ನ ಅತ್ತೆ, ಮಾವ ಇರುವಲ್ಲಿ ಬಿಲ್ವಪತ್ರೆ ಮಾರುವ ಅಜ್ಜಿಯೊಬ್ಬರು ಆಗಾಗ ಹಸಿವೆ ಎಂದುಕೊಂಡು ಬರುತ್ತಾರೆ. ನನ್ನ ಅತ್ತೆಯವರು ಏನಾದರೂ ತಿನಿಸು ಕೊಟ್ಟು ಕಳಿಸುತ್ತಾರೆ. (ನನಗೆ ಆ ಅಭ್ಯಾಸವಿಲ್ಲ!). ಒಂದು ದಿನ ನಾವು ಮಧ್ಯಾಹ್ನದ ಊಟಕ್ಕೆ ಬೇರೆಕಡೆ ಹೋಗುವುದಿತ್ತು. ಅಡುಗೆ ಮಾಡಿರಲಿಲ್ಲ. ಹಿಂದಿನ ದಿನ ಉಳಿದ ಎರಡು ಹಿಡಿ ಅನ್ನವನ್ನು ನನ್ನ ಅತ್ತೆಯವರು ರುಚಿಯಾದ ಮೊಸರನ್ನವಾಗಿ ಬದಲಿಸಿದ್ದರು. ನಾವು ಹೊರಡುವ ಹೊತ್ತಿಗೆ ಬಿಲ್ವಪತ್ರೆ ಅಜ್ಜಿ ಹಸಿವೆಂದು ಬಂದರು. ನನ್ನತ್ತೆ ಆಗಷ್ಟೇ ಮಾಡಿದ ಮೊಸರನ್ನವನ್ನು ಆಕೆಗೆ ಕೊಟ್ಟರು. ನನಗೆ ಬಹಳ ಆಶ್ಚರ್ಯವಾದರೂ ಇದೂ ಸಂಸ್ಕೃತಿಯ ಒಂದು ತುಣುಕೇ ಎಂದು ಆಯ್ದಿಟ್ಟೆ.

5. ನನ್ನ ಅತ್ತಿಗೆಯ (ಗಂಡನ ಅಕ್ಕ) ಹತ್ತು ವರ್ಷದ ಮಗ ನಾನು ಕೊಟ್ಟ ಬಹು ಸಣ್ಣದೊಂದು ಚಿಪ್ಸ್ ಪಾ್ಯಕೇಟ್ ಹಿಡಿದು ಗೆಳೆಯರೊಂದಿಗೆ ಹಂಚಿ ತಿನ್ನುತ್ತೇನೆ ಎಂದು ಹೊರಗೋಡಿದಾಗ ನನಗೆ ಸಿಕ್ಕಿದ್ದು ಸಂಸ್ಕೃತಿಯ ಇನ್ನೊಂದು ತುಣುಕು.

ಮನೆಗೆ ಯಾರಾದರೂ ಬಂದರೆ ಮನೆಯವರೆಲ್ಲರೂ ಒಮ್ಮೆ ಬಂದು ಕುಶಲ ವಿಚಾರಿಸುವುದು, ವಿಶೇಷ ಅಡಿಗೆಯೇನಾದರೂ ಮಾಡಿದರೆ ಆಪ್ತರೊಡನೆ (ಗೆಳೆಯರು, ಪಕ್ಕದ ಮನೆಯವರು) ಹಂಚಿಕೊಳ್ಳುವುದು, ಉಪ್ಪಿನಕಾಯಿ, ಹಪ್ಪಳಗಳನ್ನು ನೂರಾರು ಕಿಲೋ ಮೀಟರು ದೂರದ ನೆಂಟರಿಗೆ ಕಳಿಸುವುದು, ಸಂತಸದ ವಿಷಯಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ಇವುಗಳಲ್ಲೆಲ್ಲ ನನಗೆ ಕಾಣುವುದು ಸಂಸ್ಕೃತಿಯ ತುಣುಕುಗಳು.
ಇಲ್ಲಿ ಒಳ್ಳೆಯದೋ ಕೆಟ್ಟದೋ ಎಂಬ ಯೋಚನೆ ನಾನು ಮಾಡುತ್ತಿಲ್ಲ. ತುಂಬಾ ಯೋಚಿಸುತ್ತಾ ಹೋದರೆ ಚಿಕ್ಕ ಪುಟ್ಟ ವಿಷಯಗಳನ್ನು ಹಿಡಿದು ಸಾರ್ವಜನಿಕವಾಗಿ ಜಗಳಾಡುವುದು, ಊರಿಗೆ ಹೊಸಬರು ಬಂದರೆ ಸುಳ್ಳು ಹೇಳಿ ವಂಚಿಸುವುದು ಕೂಡಾ ಸಂಸ್ಕೃತಿಯ ಭಾಗವಾದೀತೇನೋ. ಆಗ ಸುಸಂಸ್ಕೃತಿ, ಅಸಂಸ್ಕೃತಿ ಎಂದು ವಿಂಗಡನೆ ಮಾಡಬೇಕಾದೀತು.
ನಾನು ಆಯುತ್ತಿರುವ ಸಂಸ್ಕೃತಿಯ ತುಣುಕುಗಳು ಕಾಲಾಂತರದಲ್ಲಿ ಚೆಲ್ಲಿ ಚದುರಿ ಹೋದಾವು. ಹೊಸ ತುಣುಕುಗಳು ಸಿಕ್ಕಿಯಾವು. ಹರಿವ ನೀರಿನಂತೆ ಸಂಸ್ಕೃತಿ ಬದಲಾಗುತ್ತಿರುವುದು. ಬದಲಾಗಬೇಕೂ ಕೂಡಾ. ಇಲ್ಲದಿದ್ದರೆ ನಿಂತ ನೀರಿನಂತೆ ಕೊಳೆತೀತು. ಬಾಂಧವ್ಯಗಳು ಹಳಸಿಯಾವು. ಬದಲಾಗುತ್ತಿದ್ದರೂ (ಸು)ಸಂಸ್ಕೃತಿಯ ಮೂಲ ಮೌಲ್ಯಗಳು ಉಳಿದರೆ ಸಾಕು.
- - - -

Friday, July 23, 2010

ಬಿಸಿಲ ನೆನಪು

ಮುಂಜಾನೆ (ನನಗೆ ಮುಂಜಾನೆಯೆಂದರೆ ಬೆಳಗ್ಗಿನ ಏಳು ಗಂಟೆ) ಬಿಸಿಲು ನೋಡುವುದೆಂದರೆ ನನಗೆ ಒಂದು ರೀತಿಯ ಖುಷಿ. ಬೇರೆ ಬೇರೆ ಊರುಗಳಲ್ಲಿ ಬಿಸಿಲು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ನನ್ನ ಅನಿಸಿಕೆ.
ನಾನು ಮೂಡುಬಿದಿರೆಯಲ್ಲಿದ್ದಾಗ (ದಕ್ಷಿಣ ಕನ್ನಡ) ಒಂದು ರೀತಿಯ ಬಿಸಿಲಿತ್ತು. ನಾನು ಆಗ ಒಂಭತ್ತು ಗಂಟೆ ನಂತರ ಏಳುತ್ತಿದ್ದ ಕಾರಣ ಈ characteristic ಬಿಸಿಲು ಕಾಣಸಿಗುತ್ತಿದ್ದುದು ಕಡಿಮೆ. ಆದರೂ ಮನೆಯ ಅಂಗಳದಲ್ಲಿ ಕೂತು ಅಮ್ಮ ಮಾಡಿದ ರುಚಿ ಚಹಾ ಕುಡಿಯುತ್ತಾ ಬಿಸಿಲನ್ನು ನೋಡುವುದು ಖುಷಿ ಕೊಡುತ್ತಿತ್ತು. ಮನೆಯ ಸುತ್ತುಮುತ್ತಲಿದ್ದ ತೆಂಗು, ಪೇರಳೆ(ಸೀಬೆ), ಚಿಕ್ಕಿನ ಮರ(ಸಪೋಟ)ಗಳ ನಡುವಿಂದ ಇಳಿದ ಉದ್ದುದ್ದನೆಯ ಬಿಸಿಲ ಕೋಲುಗಳು, ಅವುಗಳಲ್ಲಿ ಮಿಣಮಿಣ ಹೊಳೆಯುತ್ತ ತೇಲುವ ಧೂಳ ಕಣಗಳು.

ಉಡುಪಿಯಲ್ಲಿ ಬೇರೆ ರೀತಿಯ ಬಿಸಿಲು. ಎಳೆಬಿಸಿಲಲ್ಲಿ ನನ್ನ room mate (ನಾವು paying guest ಆಗಿ ಮನೆಯವರೊಂದಿಗೇ ಇರುತ್ತಿದ್ದುದು) ಮನೆಯ ದೇವರ ಕೋಣೆ ಅಲಂಕರಿಸಲು ಹೂವು ಕೊಯ್ಯುತ್ತಿದ್ದಳು. ಆ ಬಿಸಿಲು ಏರಲು ಶುರುವಾಗುವಾಗಲೇ ನಾವು ಆಫೀಸಿಗೆ ನಡೆದು ಹೋಗುತ್ತಿದ್ದುದು. ಮಳೆಗಾಲದಲ್ಲಿ ಆ ದಾರಿಯ ಬದಿಯಲ್ಲಿದ್ದ ಗದ್ದೆಯೊಂದರಲ್ಲಿ (ಅಲ್ಲಿ ಬೆಳೆ ಬೆಳೆದ ನೆನಪಿಲ್ಲ) ಪಕ್ಕದ ಹೊಳೆಯಿಂದ ಹರಿದ ನೀರು ತುಂಬಿರುತ್ತಿತ್ತು. ಅದರಲ್ಲಿ ತಾವರೆ, ನೈದಿಲೆ ಬೆಳೆದು ಬಿಸಿಲಿಗೆ ಅರಳುತ್ತಿದ್ದವು. ಮಳೆಗಾಲ ಮುಗಿದ ಮೇಲೂ ಕೆಲವು ತಿಂಗಳು ನೀರು ತುಂಬಿರುತ್ತಿತ್ತು. ಬೆಳಗ್ಗಿನ ನಸು ಬಿಸಿಲಲ್ಲಿ ಕೆಲವರು ತಾವರೆ ಕೊಯ್ಯುತ್ತಿದ್ದರು.

ಮೈಸೂರಿನಲ್ಲಿ ಬಹಳ ಎಳೆಯ ನಾಜೂಕಾದ ಬಿಸಿಲು. ಮೈಸೂರನ್ನು ಮುಂಜಾನೆ ನೋಡಿದರೆ ಬಹಳ ಸುಂದರ ಊರು ಅನ್ನಿಸುವುದು. ಎಲ್ಲ ಮೌನ, ಶಾಂತ. ನನ್ನ ಮಾವನವರು ಅತಿ ಇಷ್ಟಪಟ್ಟು ಬೆಳೆಸಿ ಸಾಕುತ್ತಿರುವ ಹೂದೋಟದ ತುಂಬಾ ಚಿಲಿಪಿಲಿಗುಟ್ಟುವ ಹಕ್ಕಿಗಳು. ಎಲೆಗಳ ಮೇಲೆ, ಹೂವುಗಳ ದಳಗಳ ಅಂಚಿನಲ್ಲಿ ಬಿಸಿಲಿಗೆ ಹೊಳೆಯುವ ನೀರ ಹನಿಗಳು. (ಇಬ್ಬನಿಯೋ, ಮಾವನವರು ಹಾಕಿದ ನೀರೋ ಗೊತ್ತಿಲ್ಲ)

ಬೆಂಗಳೂರಿನ characteristic ಬಿಸಿಲು? ಎರಡು ವರ್ಷವಾಯಿತು. ಇನ್ನೂ ಕಂಡಿಲ್ಲ. ದಿನವೂ ಬೆಳಗ್ಗೆ ಅಫೀಸಿಗೆ ಹೊರಡುವ ಗಡಿಬಿಡಿಯಲ್ಲಿ ಬಿಸಿಲಿನ analysis ಮಾಡಲು ಪುರುಸೊತ್ತಿಲ್ಲ. ವಾರಾಂತ್ಯದಲ್ಲಿ ಬಿಸಿಲೇರುವವರೆಗೆ ನಿದ್ದೆ!

ಕೆಲವೊಮ್ಮೆ ಒಂದು ಜಾಗದ ಬಿಸಿಲು ಇನ್ನೊಂದೆಡೆ ಕಾಣಸಿಗುತ್ತದೆ. ಮೂಡುಬಿದಿರೆಯ ಚಳಿಗಾಲದಲ್ಲಿ ಕೆಲವೊಮ್ಮೆ ಬೀಳುವ ಬಿಸಿಲು ಮೈಸೂರನ್ನು ನೆನಪಿಸುತ್ತದೆ. ಮೊನ್ನೆ ಬೆಂಗಳೂರಲ್ಲಿ ಮಳೆ ಬಂದು ಹತ್ತು ಗಂಟೆಗೆ ಮೂಡಿದ ಬಿಸಿಲು ಉಡುಪಿಯನ್ನು ನೆನಪಿಸಿತು. "ಇಂದು ಬೆಂಗಳೂರಲ್ಲಿ ಉಡುಪಿಯ ಬಿಸಿಲು" ಎಂದಿದ್ದೆ ನಾನು. ಸಂಜೆಯ ಬಿಸಿಲಲ್ಲಿ ನನಗೆ ಈವರೆಗೆ ಬೆಳಗಿನ ಬಿಸಿಲಂತಹ ವ್ಯತ್ಯಾಸ ಕಂಡಿಲ್ಲ. ಅಥವಾ ಬೆಳಗಿನ ಬಿಸಿಲಿನ ಈ ವಿಶೇಷಣಗಳೂ ನನ್ನ ಭ್ರಮೆಯೇನೋ. ಏನೇ ಇರಲಿ ಹೊಂಬಿಸಿಲು ಸಿಹಿ ನೆನಪುಗಳನ್ನು ಮೂಡಿಸುವುದು ನನಗೆ ಖುಷಿ ಕೊಡುತ್ತಿದೆ.

Monday, May 10, 2010

Communication skills ಎಂದರೇನು?

ಹೋದ ತಿಂಗಳು interpersonal effectiveness ಎನ್ನುವ ತರಬೇತಿ ಕಾರ್ಯಕ್ರಮವನ್ನು ನಮ್ಮ ಆಫೀಸು ನಡೆಸಿದ್ದು ನಾನು ಅದರಲ್ಲಿ ಭಾಗಿಯಾಗಬೇಕಾಯಿತು. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವ್ಯವಹರಿಸಬೇಕೆನ್ನುವುದರ ಬಗ್ಗೆ ತರಬೇತಿ. ಎರಡು ದಿನದ ಕಾರ್ಯಕ್ರಮ ಚೆನ್ನಾಗಿತ್ತು. ಕೆಲಸವಿಲ್ಲದ ಎರಡು ದಿನ ಮೋಜಿನಿಂದಲೂ ಕಳೆಯಿತು.
ವಾರದಲ್ಲಿ ಕನಿಷ್ಠ ನಾಲ್ಕು ದಿನ ಇಪ್ಪತ್ತು ನಿಮಿಷಗಳಿಗೆ ಕಮ್ಮಿಯಿಲ್ಲದಂತೆ ಫೋನಿನಲ್ಲಿ ಹರಟುವ ನನ್ನ ಗೆಳತಿಗೆ ಫೋನು ಮಾಡಿದೆ. ತರಬೇತಿ ಕಾರ್ಯಕ್ರಮದ ಬಗ್ಗೆ ಹೇಳಿದೆ. ವಿಷಯ ಮಾತನಾಡುತ್ತಾ communication skills ನತ್ತ ತಿರುಗಿತು.

"ನನ್ನ ಪರಿಚಯದವನೊಬ್ಬ ತಾನು ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು social networking site ಅಲ್ಲಿ ಹಾಕಿ ಬಹಳ ಚೆನ್ನಾಗಿರುವ ವಾಕ್ಯಗಳನ್ನು ಬರೆದಿದ್ದಾನೆ" ಎಂದೆ.

"ನಾನೂ ಅಂಥ ಅನೇಕ ಜನರನ್ನು ನೋಡಿದ್ದೇನೆ" ಎಂದಳು.

"ನಾನು ಉಡುಪಿಯಲ್ಲಿ ಯಾರದ್ದೋ ಮನೆ ಕೇಳಿಕೊಂಡು ಬಂದ ಅಪರಿಚಿತ ಹುಡುಗನ ಬಳಿ ಸುಮಾರು ಇಪ್ಪತ್ತು ನಿಮಿಷ ಹರಟಿ ಕೊನೆಯಲ್ಲಿ ಅವನು ಫೋನ್ ನಂಬರ್ ಕೇಳಿದಾಗ ಎಚ್ಚೆತ್ತುಕೊಂಡೆ. ಅಷ್ಟು ಮಾತಾಡಲು ಕಾರಣ ಅವನ ಮಾತಿನ ಶೈಲಿ, communication skills. ಕೊನೆಗೆ ನಾನು ಪೇಯಿಂಗ್ ಗೆಸ್ಟ್ ಆಗಿದ್ದ ಕಡೆ ಆಂಟಿಯನ್ನು ಕೇಳಿದಾಗ ಅವನ ಕೆಲಸವೇ ಅದು, ಸಿಕ್ಕಿದವರ ಜೊತೆ ಗಂಟೆಗಟ್ಟಲೆ ಹರಟುತ್ತಾನೆ ಎಂದರು" ಎಂದೆ.

"ಹೌದು. ಚೆನ್ನಾಗಿ ಮಾತನಾಡುವವರು ಎಂಥವರನ್ನೂ ಮರುಳು ಮಾಡಬಲ್ಲರು" ಎಂದಳು.

"ನನ್ನ ಗೆಳೆಯನೊಬ್ಬ ನೋಡಲು ಚಂದ ಇಲ್ಲ. ಆದರೆ ಮಾತನಾಡುವುದರಲ್ಲಿ ಬಲು ಜಾಣ. ಈ communication skills ನಿಂದಾಗಿ ಅವನಿಗೆ ಸುಂದರಿಯಾದ girl friend ಇದ್ದಾಳೆ" ಎಂದು ನಕ್ಕೆ.

"ಹಾಗಾದರೆ communication skills ಎಂದರೆ ನಿಜವಾಗಿ ಜನರನ್ನು ಮಂಗಮಾಡುವುದು ಎಂದಾಯಿತಲ್ಲವೇ?" ಎಂದಳು.
(ಮಂಗಳೂರು ಕನ್ನಡದಲ್ಲಿ ಮಂಗಮಾಡುವುದು ಎಂದರೆ ಮೂರ್ಖರನ್ನಾಗಿಸುವುದು)

"ಹೌದಲ್ಲವೇ!!" ಎನ್ನುತ್ತಾ ಇಬ್ಬರೂ ಮನಸಾರೆ ನಕ್ಕೆವು. ಇಂದಿನವರೆಗೂ ಯೋಚಿಸಿದಾಗೆಲ್ಲ ಅವಳು ಹೇಳಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ಕೆಲವೊಮ್ಮೆ ತರಬೇತಿ ಕಾರ್ಯಕ್ರಮಗಳೂ ಒಂದರ್ಥದಲ್ಲಿ ನಮ್ಮ ಕೆಲಸ ಸಾಧಿಸಲು ನಯ ವಿನಯಗಳ ಸೋಗು ಹಾಕಲು ಕಲಿಸುವುದು ಎಂದು ಅನ್ನಿಸುತ್ತದೆ.

Monday, March 29, 2010

NGO ಗಳ ಹಿಡಿತದಲ್ಲಿ...

ಇತ್ತೀಚೆಗೆ ನಮ್ಮ ಆಫೀಸಿಗೆ ಭೇಟಿಕೊಡುತ್ತಿರುವ NGO (Non-governmental Organization)ಗಳ ಸಂಖ್ಯೆ ಹೆಚ್ಚುತ್ತಿದೆ. ಆಫೀಸಿನ ಕಾಫಿ ಯಂತ್ರದ ಬಳಿ ಮೇಜು-ಕುರ್ಚಿ ಹಾಕಿ ಕೂತ ಪ್ರತಿನಿಧಿಗಳು ಅತ್ತ ಹೋದವರನ್ನೆಲ್ಲಾ ಕರೆದು ವಿವರಣೆ ನೀಡುತ್ತಾರೆ. ಕೊನೆಯದಾಗಿ ನವಿರಾಗಿ ಸಹಾಯ, ಕೊಡುಗೆ ಯಾಚಿಸಿ ನಮ್ಮನ್ನು ಇಲ್ಲ ಎನ್ನಲಾಗದ ಸಿ್ಥತಿಗೆ ತಳ್ಳುತ್ತಾರೆ. ಮೊದಲು ನನಗೆ ಇವುಗಳ ಬಗ್ಗೆ ಏನೂ ಅನ್ನಿಸುತ್ತಿರಲಿಲ್ಲ. ಆದರೆ ಈಗ ಅತಿಯಾದರೆ ಅಮೃತವೂ ವಿಷವೆಂಬಂತೆ NGOದ ಪ್ರತಿನಿಧಿಗಳು ಬರುವರೆಂದರೆ ಹೆದರಿಕೆಯಾಗತೊಡಗಿದೆ.
ಈ NGOಗಳ ಜೊತೆ ನನಗೆ ಎದುರಾದ ಕೆಲ ಪ್ರಸಂಗಗಳನ್ನು ಬರೆಯುತ್ತೇನೆ.

ದೀಪಾವಳಿ ಸಮಯದಲ್ಲಿ ಬೌದ್ಧಿಕವಾಗಿ ಕಡಿಮೆ ಬೆಳೆದಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಸಂಸ್ಥೆಯಿಂದ ಒಬ್ಬರು ಬಂದಿದ್ದರು. ಅವರು ಆ ಸಂಸ್ಥೆಯ ಆಶ್ರಯದಲ್ಲಿರುವವರು ಮಾಡಿದ ಗ್ರೀಟಿಂಗ್ ಕಾರ್ಡ್, ಬಣ್ಣದ envelop, ರಟ್ಟಿನ ಫೋಟೋ ಫ್ರೇಮ್, ಬಣ್ಣ ಹಚ್ಚಿದ ಹಣತೆ, ಮೇಣದ ಬತ್ತಿ ಹೀಗೆ ಬೇರೆ ಬೇರೆ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಹಣ ಜಾಸ್ತಿ ಇದ್ದರೂ ಸಹಾಯದ ರೂಪದಲ್ಲಿ ಹೆಚ್ಚು ಜನ ಕೊಂಡರು. ನನಗೂ ಈ ಸಹಾಯ ಕೋರುವ ವಿಧಾನ ಬಹಳ ಹಿಡಿಸಿತು. ಆದರೆ ಅವರು ಮರುದಿನವೂ ಬಂದರು. ಒಂದು ತಿಂಗಳಲ್ಲಿ ಮತ್ತೆ ಬಂದರು! ನನಗೆ ಪುನಃ ವ್ಯಾಪಾರ ಮಾಡುವ ಮನಸಿರಲಿಲ್ಲ. ಅತ್ತ ಸುಳಿದಾಡಲು ದಾಕ್ಷಿಣ್ಯವಾಗಿ ಚಹಾ ಬಿಟ್ಟು ನನ್ನ ಜಾಗದಲ್ಲೇ ಕುಳಿತಿದ್ದೆ. ಕೊನೆಗೆ ಸಂಜೆ ರೂ. 80 ತೆತ್ತು ಮೇಣದ ಬತ್ತಿಯೊಂದನ್ನು ಕೊಂಡೆ.

ಇದಾಗಿ ಜನವರಿ ತಿಂಗಳಲ್ಲಿ ವೃದ್ಧರಿಗೆ ಸಹಕರಿಸುವ ಸಂಸ್ಥೆಯವರು ಬಂದರು. ಚಹಾ ಕುಡಿಯಲು ಹೊರಟಾಗ ಹಿಡಿದರು. ಸಧ್ಯಕ್ಕೆ ಬೆಂಗಳೂರಿನಲ್ಲಿ ತಮ್ಮ ಶಾಖೆ ಇಲ್ಲವೆಂದೂ, ಬೇಗನೇ ತೆರೆಯಲಿದೆಯೆಂದೂ ಹೇಳಿ ತಮ್ಮ ಸಂಸ್ಥೆಯ ಕಾರ್ಯಕ್ರಮಗಳನ್ನೂ ಹೇಳಿದರು. ನಾನು ಹೂಂ... ಹೂಂ... ಎನ್ನುತ್ತಾ ಕೇಳುತ್ತಿದ್ದೆ. ಒಬ್ಬ ಅಜ್ಜ ಅಥವಾ ಅಜ್ಜಿಯನ್ನು ದತ್ತು ತೆಗೆದುಕೊಂಡರೆ ವರ್ಷಕ್ಕೆ ರೂ. 1,200, ಬೇರೆ ಬೇರೆ ಚಿಕಿತ್ಸೆಗಳಿಗೆ ರೂ. 4,000, ರೂ 6,000 ಇತ್ಯಾದಿ ಸಹಾಯಕ್ಕೆ ಅವಕಾಶವಿದೆ ಎಂದರು. ಕೊನೆಗೆ "ನಿಮ್ಮ ಕಂಪನಿಯವರಿಗೆ ಈ ರೂ. 4,000 ದ ಕಣ್ಣಿನ ಚಿಕೆತ್ಸೆಯ ಅವಕಾಶ ಮಾತ್ರ ಕೊಡುತ್ತಿದ್ದೇವೆ" ಎಂದರು. ಅರೇ... ಇದೇನು? ನಮಗೆ ಇಷ್ಟಬಂದಷ್ಟು ಸಹಾಯ ಮಾಡುವ ಅವಕಾಶವೇ ಇಲ್ಲವಲ್ಲಾ ಎಂದುಕೊಳ್ಳುತ್ತಾ ಹೋಗಲನುವಾದೆ. "ನಾಳೆ ಚೆಕ್ ತನ್ನಿ. ಮೊಬೈಲ್ ನಂಬರ ಕೊಡಿ. ನಾಳೆ ಚೆಕ್ ತರಲು ನೆನಪಿಸುತ್ತೇವೆ" ಎಂದರು. ನಾಳೆ ಪುನಃ ಅವರ ಮುಖ ನೋಡಬೇಕಾದ ಕಾರಣ ಸರಿಯಾದ ನಂಬರೇ ಕೊಟ್ಟು ಬಂದೆ. ಮರುದಿನ ಬೆಳಗ್ಗೆ ಬಂತು ಫೋನ್. ಚೆಕ್ ತರಲು ನೆನಪಿಸಿದರು. ನಾನು ಆಯಿತೆಂದು ಹೇಳಿದರೂ ಚೆಕ್ ಕೊಂಡು ಹೋಗಲಿಲ್ಲ. ಚಹಾ ಕುಡಿಯಲು ಹೋದಾಗ ಹೇಗೋ ದಾಕ್ಷಿಣ್ಯಬಿಟ್ಟು "sorry ನಾನು ಸಹಕರಿಸಲಾರೆ" ಎಂದೆ. ಮುಂದಿ ತಿಂಗಳು ಪುನಃ ಫೋನ್ ಮಾಡುತ್ತೇವೆ ಎಂದು ಹೇಳಿ ಹೋದರು.

ಈ ಮಾರ್ಚ್ ತಿಂಗಳು. ಬಾಲ ಕಾರ್ಮಿಕರನ್ನು ರಕ್ಷಿಸಿ ಶಿಕ್ಷಣ ನೀಡಲು ಸಹಕರಿಸುವ, ಬುಡಕಟ್ಟು ಜನಾಂಗದ ಹುಡುಗಿಯರ ಕಲ್ಯಾಣ, woman empowerment, ಜನರ ವಸತಿ ಮತ್ತು ಶ್ರೇಯಾಭಿವೃದ್ಧಿ ಕಾರ್ಯಕ್ರಮಕ್ಕೆ ಶ್ರಮಿಸುವುದೆಂದು ಹೇಳಿಕೊಳ್ಳುವ ಸಂಸ್ಥೆಯವರು ಬಂದರು. ಪುನ: ನನ್ನ ಚಹಾಕ್ಕೆ ಕುತ್ತಾದರು. ಈ ಬಾರಿ ಅವರ ಬಳಿ ಹೋಗಿ ದಾಕ್ಷಿಣ್ಯಕ್ಕೆ ಕಟ್ಟುಬೀಳುವ ಪರಿಸ್ಥತಿ ಬರಬಾರದೆಂದು ಆ ಕಡೆಗೆ ನೋಡದೆ ಹೋಗುತ್ತಿದ್ದೆ. ಒಬ್ಬ ಪ್ರತಿನಿಧಿ ಹಿಂಬಾಲಿಸಿ ಬಂದ. ಪುನಃ ಅವೇ ಮಾತುಗಳು. "... ನಿಮ್ಮ ಕಂಪನಿಯಲ್ಲಿ ಬಾಲಕಾರ್ಮಿಕರ ನಿಧಿಗೆ ಸಹಾಯ ಕೋರುತ್ತಿದ್ದೇವೆ. ಒಂದು ಮಗುವಿಗೆ ರೂ. 2,400 ಕೊಟ್ಟು sponsor ಮಾಡಬೇಕು" ಎಂದು ಕೇಳಲಾರಂಭಿಸಿದ. ನವಿರಾಗಿ ನಿರಾಕರಿಸಿದೆ. emotional blackmail ರೂಪದ್ದೇನೋ ಆರಂಭಿಸಿದ. "ಮಾ್ಯಡಮ್, ಭಾರತದಲ್ಲಿ ಬಾಲ ಕಾರ್ಮಿಕರ ಪರಿಸ್ಥಿತಿ ನಿಮಗೆ ಗೊತ್ತಿಲ್ಲವೇ? ನಿಮ್ಮ ಮನದಲ್ಲಿ ಅವರಿಗೆ ಸಹಕರಿಸುವ ಭಾವನೆ ಇಲ್ಲವೇ? ತಿಂಗಳಿಗೆ ನೂರು-ಇನ್ನೂರು ರೂಪಾಯಿ ನಿಮಗೆ ದೊಡ್ಡದೇ? Why ma'am? Don't you like to help them" ಎಂದು ಮುಂದಿನ ತಿಂಗಳಿಗೆ ಚೆಕ್ ಬರೆದು ಕೊಟ್ಟರೂ ಆದೀತೆಂದು ದಂಬಾಲು ಬಿದ್ದ. ನನಗೆ ನುಣುಚಿಕೊಳ್ಳಲು ಸಾಕು ಸಾಕಾಯಿತು. ಇನ್ನು ಮುಂದೆ NGO ಬರುವ ದಿನ ಚಹಾವನ್ನು ಕನಸಿನಲ್ಲೂ ನೆನೆಸಲಾರೆ ಎಂದುಕೊಂಡೆ.

ಸಮಸ್ಯೆ NGO ಗಳ ಸಹಾಯ ಯಾಚನೆಯ ವಿಷಯವಲ್ಲ. ಸಮಸ್ಯೆ ಪ್ರತಿನಿಧಿಗಳ ಮಾತುಗಳು, ಅವರು ವಿಧಿಸುವ ಕಟ್ಟಳೆಗಳು.
ಸಹಾಯ ಮಾಡುವ ಮನಸಿದ್ದವರು ಅವರಿಗೆ ಸಾಧ್ಯವಾದಷ್ಟು ಕೊಡುತ್ತಾರೆ. ಅದನ್ನು ಸ್ವೀಕರಿಸಬೇಕೆಂಬುದು ನನ್ನ ಅನಿಸಿಕೆ. ಅದಲ್ಲದೆ ಇಂಥದೇ scheme ಆರಿಸಬೇಕೆಂದು ಹೇರುವುದು ನನಗೆ ಸರಿಕಾಣುವುದಿಲ್ಲ. ಮತ್ತೆ ಫೋನ್ ಮಾಡಿ ಯಾಚಿಸುವುದು ಅಥವಾ ಮಾತಿನಲ್ಲಿ emotional blackmail ಮಾಡುವುದು ಸರಿಯಲ್ಲ. ಎಷ್ಟೋ ಸಾರಿ ನಮಗೆ ಅವರ ಮೇಲೆ ಭರವಸೆಯೇ ಇರುವುದಿಲ್ಲ. ನಾವು ಒಳ್ಳೆ ಮನಸಿಂದ ಕೊಟ್ಟ ಹಣ ಸರಿಯಾಗಿ ಬಳಕೆಯಾಗುವುದೆಂದ ನಂಬಕೆ ಬರುವುದಿಲ್ಲ. ವರ್ಷದಲ್ಲಿ ಆರೇಳು ಸಂಸ್ಥೆಗಳಿಗೆ ಸಹಾಯ ನೀಡಲೂ ಸಾಧ್ಯವಿಲ್ಲ. ಇನ್ನೂ ಅನೇಕ ಬಾರಿ ಕರ್ನಾಟಕದಲ್ಲಿ ಇಲ್ಲದ ಸಂಸ್ಥೆಗೆ ಕೊಡಬೇಕು ಎನಿಸುವುದಿಲ್ಲ. ಇವು personal choice. ಇವಕ್ಕೆ ಗೌರವ ಕೊಡಬೇಕು. ಒತ್ತಾಯಿಸಲು ಇವು ಸಾಮಾನು ಖರೀದಿಸಿದಂತಲ್ಲ. ಕೊಡುವವನು ಸಂತೋಷದಿಂದ ಕೊಟ್ಟರೆ ಚೆನ್ನ. ಕೊಟ್ಟವರ ಮನಸಿಗೆ ತೃಪ್ತಿಯಿರಬೇಕು ಎಂದು ನನ್ನ ಭಾವನೆ.

ನಾನು ದಕ್ಷಿಣ ಕನ್ನಡದ ಕನ್ಯಾನದಲ್ಲಿ ಬಹಳ ಹಳೆಯ ಕಾಲದಿಂದ ನಡೆಯುತ್ತಿರುವ ಸೇವಾಶ್ರಮವನ್ನು ನೋಡಿದ್ದೇನೆ. ಏನೋ ಒಂದೆರಡು ಬಾರಿ ಅಲ್ಲಿಗೆ ಅಲ್ಪ ಸಹಾಯ ನೀಡಿದ್ದೆ. ಕೆಲದಿನಗಳಲ್ಲಿ ಅವರಿಂದ ಒಂದು ಪತ್ರ ಬಂದಿತ್ತು. ಜೊತೆಗೆ ವಿಭೂತಿ ಮತ್ತು ಕುಂಕುಮ. ಸಹಕರಿಸಿದವರ ಹೆಸರಲ್ಲಿ ಪೂಜೆ ಮಾಡಿಸಿದ್ದರ ಪ್ರಸಾದ ಎಂದಿತ್ತು. ಒಮ್ಮೆ ಆ ದಾರಿಯಲ್ಲಿ ಹೋದಾಗ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅವರು ಬಲು ಪ್ರೀತಿಯಿಂದ ಬರಮಾಡಿಕೊಂಡು ಮಾತಾಡಿಸಿದರು. ಸಹಾಯ ಬಂದ್ದನ್ನು ಹೇಗೆ ಉಪಯೋಗಸುತ್ತಿದ್ದೇವೆಂದು ತೋರಿಸಿದರು. ಆಶ್ರಮಕ್ಕೆ ನಿಶ್ಚಿತ ಆದಾಯ ಬರುವಂತೆ ತೋಟ ಖರೀದಿ ಮಾಡುವ ಯೋಜನೆಯನ್ನು ಹೇಳಿದರು. ಅಲ್ಲಿ ನನ್ನಿಂದ ಏನೂ ನಿರೀಕ್ಷೆ ಮಾಡಲಿ್ಲಲ್ಲ. ಬದಲಾಗಿ ಹಬ್ಬದ ಸಮಯ ಎಂದು ನನಗೆ ಸೀರೆ ಉಡುಗೊರೆ ನೀಡಿ ಕಳಿಸಿದರು. ಅದು ನನ್ನ ಮನಸಿಗೆ ಬಹಳ ತಟ್ಟಿತು. ಯಾವತ್ತಾದರೂ ಸಹಾಯ ನೀಡುವ ಸಂದರ್ಭ ಬಂದರೆ ಇಲ್ಲಿಗೇ ಕೊಡುವೆ ಅನಿಸಿತು. ಆ ನಂತರ ಎರಡು ವರ್ಷಗಳಿಂದ ಅತ್ತ ಹೋಗಿಲ್ಲ. ಆದರೂ ವರ್ಷವೂ ಅವರ ಆಶ್ರಮದ ಉತ್ಸವವೊಂದಕ್ಕೆ ಆಮಂತ್ರಣ ಪತ್ರವನ್ನು ಪ್ರೀತಿಯಿಂದ ಕಳಿಸುತ್ತಾರೆ.

ಇದೇ ಕಾರಣಕ್ಕೋ ಏನೋ ಈ ಕಾಫಿ ಯಂತ್ರದಬಳಿ ಎರಡು ತಿಂಗಳಿಗೊಮ್ಮೆ ಕಾಣುವ NGO stall ಗಳು, ಅವುಗಳ ಅರಳು ಹುರಿದಂತೆ ಇಂಗ್ಲೀಷ್ ಮಾತಾಡುವ ಪ್ರತಿನಿಧಿಗಳು ನನ್ನನ್ನು ಸೆಳೆಯಲು ವಿಫಲವಾದದ್ದು.

Monday, March 15, 2010

ಸಣ್ಣದೊಂದು ಅನುಭವದ ಪಾಠ

ಎಷ್ಟೋ ದಿನಗಳಿಂದ ಉಸಿರುಗಟ್ಟಿಸುವಷ್ಟು ಕೆಲಸದಲ್ಲಿ ಹುದುಗಿ ಹೋಗಿದ್ದರಿಂದ ಅನೇಕ ಬರೆಯಲರ್ಹ ವಿಚಾರಗಳು ತಲೆಯಲ್ಲಿ ಬಂದರೂ ಬರೆಯಲಾಗದೆ ಕೆಲವಂತೂ ಮರೆತೇ ಹೋಗಿವೆ. ಏನಿಂಥಾ ಕೆಲಸ? ಎಂದು ಯೋಚಿಸುತ್ತಿದ್ದೀರಾದರೆ ಕೇಳಿ.

ನನ್ನ ಯಜಮಾನರಿಗೆ ಕಾಲಿನ ಚಿಕ್ಕ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಗಿದ್ದು ಹಲವು ವರ್ಷಗಳಿಂದ "TODO" list ನಲ್ಲಿ ಇತ್ತು. ಹಠಾತ್ತಾಗಿ ಅದನ್ನು ಮಾಡಬೇಕಾದ ಸಂದರ್ಭ ಬಂದು (ಕಾಲ ಕೂಡಿಬಂದುದು ಎಂದು ಹೇಳಬಹುದೇನೋ) ಅದೇ ವಿಚಾರದಲ್ಲಿ ಎರಡು ತಿಂಗಳು ಆಫೀಸು, ಮನೆ, ಆಸ್ಪತ್ರೆ ಎಂದು ಓಡಾಡಬೇಕಾಗಿ ಬಂತು. ಅದರ ನಡುವೆ ಕೆಲ ವಾರಗಳಿಂದ ಪ್ರಾಜೆಕ್ಟ್ ನ ರಿಲೀಸ್ ಎಂದು ದಿನದಲ್ಲಿ ೧೦ ಗಂಟೆ ಆಫೀಸಿನಲ್ಲಿ ಒದ್ದಾಡಿ ಉಸ್ಸಪ್ಪಾ ಎಂದು ನಿಟ್ಟುಸಿರು ಬಿಡುತ್ತಿರಬೇಕಾದರೆ, ವೈರಸ್ ಗಳು "ನಿನ್ನನ್ನು ಸುಮ್ಮನೆ ಕೂರಲು ಬಿಡಲಾರೆವು" ಎಂದು ಶೀತ, ಕೆಮ್ಮು ತಂದಿಟ್ಟಿವೆ. ಯಜಮಾನರಿಗೆ ನಾಲ್ಕು ಚಕ್ರದ ವಾಹನ ಬಿಡಲು ಡಾಕ್ಟರು ಸಮ್ಮತಿ ನೀಡಿದ್ದೊಂದು ಸಮಾಧಾನ.

ಈ ಎರಡು ತಿಂಗಳಲ್ಲಿ ನನಗೆ ಹೊಸತಾದ ಬೇರೆ ಬೇರೆ ಅನುಭವಗಳಾಗಿವೆ. ಅವುಗಳಿಂದ ಚಿಕ್ಕ ಚಿಕ್ಕ ಪಾಠಗಳೂ ಸಿಕ್ಕಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳಲಿದ್ದೇನೆ.

ನಾವು ಪ್ರತಿದಿನ ಬಹಳಷ್ಟು ವಿಚಾರಗಳನ್ನು ತಿಳಿದುಕೊಳ್ಳಲೆತ್ನಿಸುತ್ತೇವೆ. ಹೆಚ್ಚಿನ ಸಲ ಅದು ನಮ್ಮ ಆಸಕ್ತಿಯಿಂದಾಗಿರುತ್ತದೆ. ನಮಗೆ ಉಪಯೋಗವಿದೆಯೋ ಇಲ್ಲವೋ ಎಂದು ನೋಡಲು ಹೋಗುವುದಿಲ್ಲ. ಕೆಲವು ಬಾರಿ ಹೀಗೆ ಯಾವತ್ತೋ ತಿಳಿದುಕೊಂಡ ವಿಚಾರಗಳು ಇನ್ನು ಯಾವತ್ತೋ ಉಪಯೋಗಕ್ಕೆ ಬರುತ್ತವೆ. ಸ್ಟೀವ್ ಜಾಬ್ಸ್ ಎಂದೋ ಕಲಿತ calligraphy, ಮೊದಲ Macintosh computer ನ ಸುಂದರ typography ಗೆ ಕಾರಣವಾದಂತೆ. (ನನ್ನದು ಇಷ್ಟು ದೊಡ್ಡ ವಿಚಾರವಲ್ಲ!)

ನಮ್ಮ ಆಸ್ಪತ್ರೆ ಖರ್ಚುಗಳನ್ನು ಇನ್ಶೂರೆನ್ಸ್ ಕಂಪನಿ ನೋಡಿಕೊಳ್ಳುವುದಿತ್ತು. ನಾನು ಆಸ್ಪತ್ರೆಯಲ್ಲಿ ಕುಳಿತು ನನ್ನ ಯಜಮಾನರ ಹೆಲ್ತ್ ಇನ್ಶೂರೆನ್ಸ್ ನ ಅತ್ಯಂತ ಉದಾಸೀನಮಯವಾದ document ಅನ್ನು ಓದುತ್ತಿದ್ದೆ. ಯಾಕೆ ಓದಬೇಕೆಂದೂ ತಿಳಿದಿರಲಿಲ್ಲ. ಮಾಡಲು ಕೆಲಸವಿಲ್ಲದೆ ಅದನ್ನು ಓದುತ್ತಿದ್ದೆ. ಡಿಸ್ಚಾರ್ಜ್ ಮಾಡುವ ದಿನ ನೋಡಿದಾಗ ಬಿಲ್ ನಲ್ಲಿ ಕೆಲವು ಸಾವಿರ ನಮ್ಮ ಕೈಯಿಂದ ಕೊಡಬೇಕೆಂದು(copayment) ಬರೆದಿತ್ತು. ನನಗೆ ಆಶ್ಚರ್ಯವಾಯಿತು. ಆ document ಪ್ರಕಾರ ನಮಗೆ ಕೋ-ಪೇಮೆಂಟು ಬೀಳಬಾರದಿತ್ತು. ಬಿಲ್ ಕೌಂಟರಿನಲ್ಲಿದ್ದವನ ಬಳಿ ಇನ್ಶೂರೆನ್ಸ್ ಕಂಪನಿ ಕಳಿಸಿದ ಮನ್ನಣೆ ಪತ್ರವನ್ನು (approval letter) ತೋರಿಸಲು ಕೇಳಿದೆ. ಅದನ್ನು ಓದಿ, ಆತ ಹಾಕಿರುವ ಲೆಕ್ಕಾಚಾರ ತಪ್ಪಿದೆಯೆಂದು ಮನವರಿಕೆ ಮಾಡಿಸಲು ಸಾಕು ಸಾಕಾಯಿತು. ಕೊನೆಗೆ ಆತ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳುತ್ತಾ ಹೊಸದಾಗಿ ಬಿಲ್ ತಯಾರಿಸಿ ಕೊಟ್ಟ. ನನಗೆ ಆ ಇನ್ಶೂರೆನ್ document ನಲ್ಲಿ ಏನಿದೆಯೆಂದು ತಿಳಿದಿಲ್ಲದಿದ್ದರೆ ಕೆಲವು ಸಾವಿರ ನಷ್ಟ ಮಾಡಿಕೊಳ್ಳಬೇಕಾಗುತ್ತಿತ್ತೇನೋ. ಸುಮ್ಮನೆ ಓದಿದ್ದು ಉಪಯೋಗಕ್ಕೆ ಬಂದಿತ್ತು.

ಇದು ಇನ್ನೊಂದು ವಿಷಯ. ನಾನು ಕಾರು ನಡೆಸಲು ಕಲಿತು, ಲೈಸನ್ಸ್ ಪಡೆದು ನಾಲ್ಕು ವರ್ಷವಾಗಿದೆಯೇನೋ. ಇಂದಿಗೂ ಸರಿಯಾಗಿ ನಡೆಸಿದ್ದಿಲ್ಲ. ಮೂರು ನಾಲ್ಕು ಕಿಲೋಮೀಟರು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ ನಡೆಸಿ ಸುಮ್ಮನೇ ಬಿಟ್ಟಿದ್ದೆ. ಅಭ್ಯಾಸ ಬಿಟ್ಟು ಹೋದಂತೆಲ್ಲ, ಕಾರು ಬಿಡಲು ಕುಳಿತಾಗ ಭಯ ಆವರಿಸಲಾರಂಭಿಸಿತ್ತು. ಆಸ್ಪತ್ರೆ, ಮನೆ, ಆಫೀಸು ಎಂದು ಓಡಾಡುವಾಗೆಲ್ಲಾ ರಿಕ್ಷಾ, ಟ್ಯಾಕ್ಸಿ ಅಥವಾ ವಜ್ರ (ಬಸ್ಸು)ವನ್ನು ನಂಬಿಕೊಂಡೇ ಬದುಕಬೇಕಾದ್ದಕ್ಕೆ ನನ್ನನ್ನು ನಾನೇ ಹಳಿದುಕೊಂಡಿದ್ದೆ. ಉಪಯೋಗವಿತ್ತೋ, ಇಲ್ಲವೋ ಕಾರೊಂದು ಕಲಿತಿದ್ದರೆ... ಎಂದು ಬಹಳ ಸಲ ಯೋಚಿಸುವಂತಾಗಿತ್ತು. ನಾವು ಏನಾದರೂ ಕಲಿಯುತ್ತಿರುವಾಗ ಸಧ್ಯದ ಉಪಯೋಗವನ್ನು ಮನಸಲ್ಲಿರಿಸದಿರುವುದೇ ಒಳ್ಳೆಯದೇನೋ. ಕಲಿತದ್ದು ಎಂದಾದರೂ ಒಂದುದಿನ ಉಪಯೋಗಕ್ಕೆ ಬರುತ್ತದೆ. ಕಲಿತದ್ದರ ಅಗತ್ಯ ಬಾರದಿದ್ದರೆ ಸುಮ್ಮನಿದ್ದುಬಿಡುವುದು, ಅಗತ್ಯ ಬಂದಾಗ ಕಲಿತಿರದೆ ದುಃಖಿಸುವುದಕ್ಕಿಂತ ಒಳ್ಳೆಯದೆಂದು ನಾನು ಅರಿತುಕೊಂಡೆ.

Wednesday, February 17, 2010

Water colour painting ನನ್ನ ನೆಚ್ಚಿನ ಹವ್ಯಾಸ. ಆದರೆ ಅದನ್ನು ಮಾಡದೆ ವರ್ಷವೇ ಆಯಿತು.
ಬೆಂಗಳೂರಿಗೆ ಬಂದು ಎರಡು ವರ್ಷವಾಗಲು ಬಂತು. ಕೇವಲ ಒಂದೇ painting ಮಾಡಿದ್ದೇನೆ. ಆದರೆ ಅದು ಹಾಳೆಯ ಗುಣದಿಂದಾಗಿ ಬಣ್ಣ ಹಚ್ಚುವಾಗ ಸಿಪ್ಪೆ ಎದ್ದು ಬಹಳ ದುಃಖವಾಯಿತು. ಬಿಟ್ಟು ಹೋದ ಹವ್ಯಾಸವನ್ನು ಪುನಃ ಮುಂದುವರಿಸುವಾಸೆ. ಈ ವರ್ಷ ಕನಿಷ್ಟ ಮೂರಾದರೂ painting ಮಾಡಬೇಕೆಂದುಕೊಂಡಿದ್ದೇನೆ. ನನಗೊಂದು ಪ್ರಶ್ನೆಯಿದೆ. ಬ್ಲಾಗ್ ನಲ್ಲಿ ಹಾಕಿದರೆ ಉತ್ತರ ಬಂದೀತೆಂದು ಭಾವಿಸಿದ್ದೇನೆ.
ಅದಕ್ಕಿಂತ ಮೊದಲು ಕಳೆದ ವರ್ಷ ಮಾಡಿದ painting ನ ಫೋಟೊ:



Water colour painting ಮಾಡಲು ಹಾಳೆಗಳು ಬೇಕು. ಬಣ್ಣವನ್ನು wash ಮಾಡಿದರೆ ಹಾಳೆಯ ಸಿಪ್ಪೆ ಏಳಬಾರದು. ಎಂಥ ಹಾಳೆ ಉಪಯೋಗಿಸಬೇಕು? ಮತ್ತು ಬೆಂಗಳೂರಿನಲ್ಲಿ ಯಾವ ಅಂಗಡಿಯಲ್ಲಿ ಅದನ್ನು ಪಡೆಯಬಹುದು? ಗೊತ್ತಿದ್ದರೆ ದಯವಿಟ್ಟು ಹೇಳಿ.

Tuesday, February 9, 2010

ALERT

Please do not click on link
see-new-pics. blogspot .com

You google account password gets hacked!

Thursday, February 4, 2010

ಹುಚ್ಚು ಮನದ ಹಲವು ಆಲೋಚನೆಗಳು

3-4 ವರ್ಷಗಳ ಹಿಂದಿನ ಮಾತು. ನಾನು ಹಾಸ್ಟೆಲಲ್ಲಿ, ಪೇಯಿಂಗ್ ಗೆಸ್ಟ್ ಆಗಿ ಕಳೆದ ದಿನಗಳು. ಮದುವೆ, ಪೂಜೆ ಇತರ ಸಮಾರಂಭಗಳಿಗೆ ಒಮ್ಮೊಮ್ಮೆ ಹೋಗಬೇಕಾಗುತ್ತಿತ್ತು. ಅಲ್ಲಿ ಅನೇಕ ಸಂಬಂಧಿಗಳು ಸಿಗುತ್ತಿದ್ದರು. ಅನೇಕ ಹೆಂಗಸರನ್ನು ನೋಡಿ ಮಾತ್ರ ನೆನಪಿರುತ್ತಿತ್ತು. ಅವರು ಏನು, ಎಲ್ಲಿ ಇರುವುದು, ನನಗೆ ಯಾವ ರೀತಿ ಸಂಬಂಧಿಕರು? ಇವೆಲ್ಲ ನೆನಪೇ ಇರುತ್ತಿರಲಿಲ್ಲ. ಅದನ್ನು ತಿಳಿಯುವ ಆಸಕ್ತಿಯೂ ಇರುತ್ತಿರಲಿಲ್ಲ.
ಕೆಲವರಂತೂ ಕಂಡಾಕ್ಷಣ "ನನ್ನ ಗುರುತು ಸಿಕ್ಕಿತಾ?" ಎಂದು ಕೇಳುವುದು; ಹೌದೆಂದರೆ "ಹಾಗಾದರೆ ಯಾರೆಂದು ಹೇಳು" ಎಂದು ಪೀಡಿಸುವುದು ಮತ್ತೆ ನಾನು "ಅದೂ...ಆ..." ಎಂದು ತೊದಲಿದಾಗ "ನಾನು ನಿನ್ನ ಅಜ್ಜಿಯ ಸೋದರ ಮಾವನ....." ಎಂದು ಬಿಡಿಸಲಾರದ ಒಗಟೊಂದನ್ನು ನನ್ನ ಮುಂದಿಡುವುದು ಮಾಡುತ್ತಿದ್ದರು.
ಇನ್ನು ಕೆಲವರು ನಾನು ಹಾಸ್ಟೆಲಲ್ಲಿ ಯಾ ಪೇಯಿಂಗ್ ಗೆಸ್ಟ್ ಆಗಿ ಇರುವುದೆಂದು ತಿಳಿದ ಕೂಡಲೇ "ಬೆಳಗ್ಗೆ ಏಳುವುದು ಎಷ್ಟು ಗಂಟೆಗೆ? ತಿಂಡಿಗೆ ಏನು ಕೊಡುತ್ತಾರೆ? ಮಧ್ಯಾಹ್ನ ಊಟಕ್ಕೇನು ಕೊಡುತ್ತಾರೆ? ಎಷ್ಟು ಹೊತ್ತಿಗೆ ಊಟ? ಸ್ನಾನಕ್ಕೆ ಬಿಸಿನೀರು ಇದೆಯಾ?" ಎಂದೆಲ್ಲ ನಾನು ಗಣನೆಗೇ ತೆಗೆದುಕೊಂಡಿರದ ವಿಷಯಗಳನ್ನು ಕೇಳುತ್ತಾರೆ. ನಾನು ಎಷ್ಟೋ ಬಾರಿ "ನಾನು ಹೇಗಿದ್ದರೆ ಇವರಿಗೇನಪ್ಪಾ" ಎಂದು ಆಶ್ಚರ್ಯಪಟ್ಟಿದ್ದೇನೆ. ಈ ಅಪ್ರಯೋಜಕ ಕಾಡು ಹರಟೆಗಿಂತ ಏನಾದರೂ ಒಳ್ಳೆಯ ವಿಚಾರ ಮಾತಾಡಿದರೆ ಆಗುವುದಿಲ್ಲವೇ ಅಥವಾ ಸುಮ್ಮನಿರುವುದು ಒಳ್ಳೆಯದಲ್ಲವೇ? ಎಂದು ಅನಿಸಿದ್ದಿದೆ. ಇದನ್ನು ಕೆಲವರ ಬಳಿ ಹೇಳಲು ಹೋಗಿ "ಏನೂ ಮಾತನಾಡದೆ ಹೋದರೆ relations ಉಳಿಯುವುದು ಹೇಗೆ? ಇಷ್ಟಕ್ಕೂ ಅವರು ಹಾಗೆ ಕೇಳಿದರೆ ತಪ್ಪೇನಿದೆ?" ಎಂದೂ ನಾನು ಬೈಸಿಕೊಂಡದ್ದಿದೆ.

ಏನೇ ಇರಲಿ ನನಗಂತೂ ಈರೀತಿ ಹರಟುವುದಕ್ಕಿಂತ "blank" ಆಗಿ ಒಂದೆಡೆ ಕುಳಿತಿರುವುದು ಇಷ್ಟವಾಗುತ್ತದೆ. "blank" ಆಗಿರುವುದು ಹೇಗೆಂದು ಇನ್ನೊಮ್ಮೆ ಹೇಳುತ್ತೇನೆ.

ಮದುವೆಯಾದ ನಂತರ ಈ ಪ್ರಶ್ನೆಗಳ ಸ್ವರೂಪ ಬದಲಾಗಿದೆ. ಮಾತ್ರ ಅಷ್ಟೇ ಅಪ್ರಯೋಕವಾಗಿವೆ. "ಅಡುಗೆಗೆ ಏನು ಮಾಡುವುದು?", "ಇಬ್ಬರೂ ಕೆಲಸಕ್ಕೆ ಹೋಗುವಾಗ lunch box ಕೊಂಡೊಯ್ಯುತ್ತೀರಾ?", "ರಾತ್ರಿಗೆ ಅಡುಗೆ ಬೆಳಗ್ಗೆ ಮಾಡಿದುವುದಾ?", "ಎಷ್ಟು ಹೊತ್ತಿನ ಬಸ್ ಪ್ರಯಾಣ?" ಇತ್ಯಾದಿ. ಆದರೆ ಈಗ ನನಗೆ ಇವಕ್ಕೆ ಉತ್ತರಿಸುವುದರಲ್ಲಿ ತಪ್ಪು ಕಾಣುವುದಿಲ್ಲ. ಪ್ರಶ್ನೆಗಳು ಮೊದಲಿನಷ್ಟು irritate ಆಗುವುದಿಲ್ಲ.

ತೀರ ಇತ್ತೀಚೆಗಷ್ಟೇ ಯೋಚಿಸಿದೆ... ಈ ಬದಲಾವಣೆಗೆ ಕಾರಣ ಏನಿರಬಹುದೆಂದು. ಇನ್ನೂ ಗೊತ್ತಾಗಿಲ್ಲ. ಸಹನೆ ಹೆಚ್ಚಿದೆಯೇ? ಅಲ್ಲಾ ನಾನು ಇವನ್ನು tolerate ಮಾಡಲು ಕಲಿತಿರುವೆನೇ? ಇದಕ್ಕೇ maturity ಎನ್ನುವುದೇ? ಅಥವಾ ನನ್ನಲ್ಲಿ ಮಾತನಾಡಲು ವಿಷಯಗಳು ಮುಗಿದುಹೋಗಿವೆಯೇ?
ನಾನು ಇದನ್ನು ಇಷ್ಟಪಡುತ್ತಿದ್ದೇನೆಯೇ? ಅಯ್ಯೋ... ಹಾಗಾದರೆ ನಾನು ಮುಂದೊಂದು ದಿನ ಇವರಂತೆ ಬೇರೆಯವರ ತಲೆತಿನ್ನಲಿದ್ದೇನೆಯೇ? ನನಗೆ ವಯಸ್ಸಾಗುತ್ತಿರುವುದರ ಸೂಚನೆಯೇ? ಹಾ.. ಹೆದರಿಕೆಯಾಗತೊಡಗಿದೆ.
ವರ್ಷಗಳು ಉರುಳಿದಂತೆ ಜ್ಞಾನ ಹೆಚ್ಚಬೇಕು, ಅನಗತ್ಯ ಮಾತು ಕಡಿಮೆಯಾಗಬೇಕು ಎಂದು ನನ್ನ ಭಾವನೆ. ನನ್ನ ಜ್ಞಾನ ವೃದ್ಧಿಯಾಗುವುದು ನಿಂತಿದೆಯೇ? ತಲೆ ಬಡ್ಡಾಗುತ್ತಿದೆಯೇ? (ಮಂಗಳೂರು ಕಡೆ ಇದರ ಅರ್ಥ, ಮೆದುಳು sharpness ಕಳೆದುಕೊಂಡಿದೆ ಎಂದು) ಹಾಗಿದ್ದರೆ ನಾನು ಏನು ಮಾಡುತ್ತಿದ್ದೇನೆ? ಯೋಚಿಸತೊಡಗಿದ್ದೇನೆ.
ಇದಕ್ಕಾಗಿ ಹೊಸವರ್ಷದಲ್ಲಿ resolution ತೆಗೆದುಕೊಳ್ಳಲು ಆಲೋಚಿಸಿದ್ದೇನೆ.

ಈ ವರ್ಷದಿಂದ ಮುಂದೆಂದಿಗೂ ಅನಗತ್ಯ ಹರಟೆಯಲ್ಲಿ ತೊಡಗಲಾರೆ. ಅಥವಾ ಹೀಗೆ ಹೇಳಲೇನೋ... ಈ ವರ್ಷದಿಂದ ಮುಂದೆ ನಾನು knowledge ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇನೆ. (ಇದರಿಂದ ಅನಗತ್ಯ ಹರಟೆ ತಂತಾನೇ ಮರೆತುಹೋಗುವುದೆಂಬ ಅನಿಸಿಕೆ)... ಏನೋ... resolution ಏನು ಎಂದೂ ಹೊಳೆಯುತ್ತಿಲ್ಲ!!

Monday, January 25, 2010

ಕನ್ನಡ ಚೆನ್ನಾಗಿದೆಯಾ?

ಮೈಸೂರಿನ ಬೇಕರಿಯೊಂದರಲ್ಲಿ cashier ಮುಂದೆ ಕಂಡ ಫಲಕ ಇದು.
ಫೋಟೋ ತೆಗೆಯಬೇಕೆನಿಸಿದರೂ cashier ಭಯದಿಂದ ಸುಮ್ಮನಾದೆ.
ನೆನಪಿದ್ದಷ್ಟನ್ನು ಹಾಕಿದ್ದೇನೆ. ಕೊನೆಯದು ಏನೆಂದು ಇನ್ನೂ ಗೊತ್ತಾಗಲಿಲ್ಲ.

ಟೊಮೆಟೊ ಅಪ್ಪಳ ...... 22=00
ಹುದ್ದಿನ ಮಸಾಲೆ ....... 22=00
ಫೇಣಿ ಅಪ್ಪಳ ........... 22=00
ಅಕ್ಕಿ ಅಪ್ಪಳ ............ 22=00
ಕಾರ ಅಪ್ಪಳ ............ 22=00
ಉರುಳ್ಳಿ ಅಪ್ಪಳ ........ 25=00

Friday, January 1, 2010

2010ನ ಶುಭಾಶಯಗಳು

ಹೊಸ ವರುಷದ ಹಾರ್ದಿಕ ಶುಭಾಶಯಗಳು. 2010 ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡಲಿ. ಹೊಸ ವರ್ಷದಲ್ಲಿ ಅನೇಕ ಬರಹಗಳನ್ನು ಬರೆಯಲಿಚ್ಛಿಸಿದ್ದೇನೆ. ಅವಕ್ಕೆಲ್ಲ ಅವಕಾಶ ಸಿಗುವುದರೊಂದಿಗೆ ಸಮಯವೂ ಹೊಂದಾಣಿಕೆಯಾಗಲೆಂದು ಆಶಿಸುತ್ತೇನೆ.