Monday, September 27, 2010

ಭಾನುವಾರದ ಟೈಂಪಾಸ್

ನಿನ್ನೆ ಭಾನುವಾರ ನನ್ನ ಅತ್ತಿಗೆ(ನಾದಿನಿ)ಗೆ ಒಂದು ಪರೀಕ್ಷೆ ಬರೆಯಲಿದ್ದ ಕಾರಣ ಅವರು ಪತಿ ಸಮೇತರಾಗಿ ಶನಿವಾರ ಮನೆಗೆ ಬಂದಿದ್ದರು. ಎಂ. ಎಸ್. ರಾಮಯ್ಯ ಕಾಲೇಜಿನಲ್ಲಿ ಹನ್ನೊಂದು ಗಂಟೆಗೆ ನಡೆಯಲಿದ್ದ ಪರೀಕ್ಷೆಗೆ ನಾವು ಒಂಭತ್ತು ಗಂಟೆಯೊಳಗಾಗಿ ಮನೆ ಬಿಡಬೇಕಿತ್ತು. ಏನೂ ಎಡವಟ್ಟಾಗದಂತೆ ಆರೂವರೆಗೆ ಎದ್ದ ನಾನು ಇಡ್ಲಿ ಬೇಯಲು ಇಟ್ಟು, ಸಾಂಬಾರಿಗೆ ತರಕಾರಿ ಬೇಯಲು ಇಟ್ಟು ಸುಮ್ಮನೆ ಕೂತೆ. ನಿದ್ದೆಯ ಜೊಂಪು ಹತ್ತಿತು. 5... 10... 15... 20... 30 ನಿಮಿಷ ಕಳೆದಾಗ ಕೃಷ್ಣನನ್ನು(ನನ್ನ ಪತಿ) ಸುಟ್ಟ ವಾಸನೆ ಬಡಿದೆಬ್ಬಿಸಿರಬೇಕು. "ಏ ಒಲೆಮೇಲೆ ಎಂತದ್ದು?" ಎಂದರು. ನಾನು ದಡಬಡ ಎದ್ದು ಓಡಿ ನೋಡಿದರೆ ತರಕಾರಿ ಸೀದು ತಳಕ್ಕಂಟಿದ್ದಲ್ಲದೆ ಪಾತ್ರೆಯ ತಳದಲ್ಲಿ ನೇರಳೆ ಬಣ್ಣದ ಶಾಶ್ವತ ಉಂಗುರ ಮೂಡಿತ್ತು. ಅತ್ತಿಗೆ ಮಾಡಿದ ಪುಣ್ಯವಿರಬೇಕು. ಇಡ್ಲಿ ಸರಿ ಇತ್ತು. ಪುನಃ ಹೊಸದಾಗಿ ಸಾಂಬಾರು ಮಾಡಿ ತಿಂದು ಒಂಭತ್ತು ಗಂಟೆಗೆ ಮನೆ ಬಿಟ್ಟೆವು.

ಹತ್ತು ಗಂಟೆಗೆ ಎಂ. ಎಸ್. ರಾಮಯ್ಯ ಕಾಲೇಜು ತಲುಪಿಯಾಗಿತ್ತು. ಪರೀಕ್ಷಾ ಕೊಠಡಿ ಹುಡುಕಿ ಅದರ ಮುಂದೆ ಕುಳಿತಿರಬೇಕಾದರೆ ಅತ್ತಿಗೆ ಪುಸ್ತಕ ತೆರೆದರು. ನನಗೆ ಮಾಡಲು ಕೆಲಸವಿಲ್ಲ. ಜನರನ್ನು ನೋಡುತ್ತಾ ಕುಳಿತೆ. ಒಂದು ಮಹಿಳಾ ಗುಂಪು ತಮಗೆ ತೋಚಿದ ಪ್ರಶ್ನೋತ್ತರಗಳ ಕೊಡು-ಪಡೆಯುವಿಕೆ ನಡೆಸಿತ್ತು. ಇನ್ನೊಬ್ಬಳು ತಾನು ಉರುಹೊಡೆದುದನ್ನು ಪುನಃ ಹೇಳಿಕೊಳ್ಳುತ್ತಿರುವಂತಿತ್ತು. ಆಕೆ ಶೂನ್ಯ ದೃಷ್ಟಿಯಲ್ಲಿ ಮಾಡಿನ (ಛಾವಣಿ) ಮೂಲೆಯನ್ನು ನೋಡುತ್ತಾ ಉರುಹೊಡೆಯುತ್ತಿದ್ದರೆ ಅಲ್ಲೇ ಉತ್ತರಗಳು ಕಂಡಂತಿತ್ತು. ಮತ್ತೊಬ್ಬಳು ಲಿಪ್ ಸ್ಟಿಕ್ ಹಾಕಿ ಸಂಪೂರ್ಣ ಮೇಕಪ್ಪಿನೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದಳು. ಒಬ್ಬರ ತಲೆಕೂದಲು ನೆಟ್ಟಗೆ ನಿಮಿರಿ ಕೆದರಿಕೊಂಡು ಚಾರ್ಜ್ ಆದ ಹಾಗೆ ಕಾಣುತ್ತಿದ್ದರು. ನನಗೆ ಪುನಃ ನಿದ್ದೆಯ ಜೊಂಪು ಹತ್ತುತ್ತಲಿತ್ತು. ಅಷ್ಟರಲ್ಲಿ ಪರೀಕ್ಷೆ ಆರಂಭವಾಗುವ ಗಂಟೆಯಾಯಿತು. ನಾವು ಮೂವರು ಅತ್ತಿಗೆಯನ್ನು ಬಿಟ್ಟು ಹೊರಬಂದೆವು.

ಎರಡು ಗಂಟೆ ಕಾಲಹರಣ ಮಾಡಬೇಕಿತ್ತು. ಎಲ್ಲಿ ಹೋಗುವುದು ಎಂದುಕೊಂಡಾಗ ಮಂತ್ರಿ ಸ್ಕ್ವೇರ್ ನೆನಪಾಯಿತು. ಅಲ್ಲಿಗೆ ಹೋದೆವು. ಏನೂ ಕಲ್ಪನೆ ಹೊತ್ತು ಮಂತ್ರಿ ಹೊಕ್ಕ ನನಗೆ ಅಷ್ಟೇನೂ ವಿಶೇಷತೆ ಗೋಚರಿಸಲಿಲ್ಲ. ದೊಡ್ಡ ಕಟ್ಟಡದಲ್ಲಿ ತುಂಬಿದ ಅನೇಕಾನೇಕ ಅಂಗಡಿಗಳಂತೆ ಕಂಡಿತು. ಮಾಲ್ ಹೊಕ್ಕರೆ ಬೇಡದ ವಸ್ತುಗಳೂ ಅಗತ್ಯವೆನಿಸುತ್ತವೆ. ಸಧ್ಯಕ್ಕೆ ಒಂದು ಪೆನ್ ಡ್ರೈವ್ ಅತ್ಯಗತ್ಯ ವಸ್ತುವೆನಿಸಿತು. ಅದನ್ನು ಕೊಂಡಾಗುವಾಗ ಹೊಟ್ಟೆಯೊಳಗೆ ಹಸಿವು ಕುಣಿತ ಆರಂಭಿಸಿತು. ಅಲ್ಲೇ ಪಾನೀಯದ ಅಂಗಡಿ ಕಂಡಿತು. ಬ್ಲೂ ಬೆರ್ರಿ, ಸ್ಟ್ರಾ ಬೆರ್ರಿ, ರಾಸ್ಪ್ ಬೆರ್ರಿ smoothie ಹೇಳಿದೆವು. ಲೋಟಗಳು ಬಂದಾಗ ಎಲ್ಲ ಒಂದೇ ಬಣ್ಣ. ಬರೀ contrast ವ್ಯತ್ಯಾಸ ಅಷ್ಟೇ. ರುಚಿ? ಹುಳಿ ವ್ಯತ್ಯಾಸ ಅಷ್ಟೇ. ಹಲ್ಲು ಮುರಿಯುವಷ್ಟು ತಂಪು. ಕಾಲು ಲೀಟರು ಇದ್ದಿರಬಹುದು. 280 ರೂಪಾಯಿ ತೆತ್ತ ಕರ್ಮಕ್ಕೆ ಮುಗಿಸಬೇಕಾಯಿತು. ಲೋಟ ಅರ್ಧ ತುಂಬಿದೆ ಎಂದರೆ ಧನಾತ್ಮಕ ಚಿಂತನೆಯಂತೆ. ನಮಗಂತೂ "ಇನ್ನೂ ಅರ್ಧ ಬಾಕಿ ಇದೆ" ಎಂಬುದು ಋಣಾತ್ಮಕವೇ ಆಗಿತ್ತು. ಈ ಪೇಯಗಳು ಕೆಲವರಿಗೆ ಇಷ್ಟವಾದೀತೇನೋ. ನಾನು ಈ ವಿಷಯದಲ್ಲಿ ಹಿಂದುಳಿದ ವರ್ಗಕ್ಕೆ (ಕಾಲಮಾನದ ಪ್ರಕಾರ) ಸೇರಿದ್ದೇನೆ.

ಸಮಯ ಮೀರಲಾರಂಭಿಸಿತ್ತು. ಪರೀಕ್ಷೆ ಮುಗಿಯುವ ಹೊತ್ತಿಗೆ ಎಂ. ಎಸ್. ರಾಮಯ್ಯ ತಲುಪಬೇಕಿತ್ತು. ಕೊನೆ ಮಹಡಿ ನೋಡಲಾಗಲಿಲ್ಲ. "ಮಂತ್ರಿ ಹೇಳುವಂಥಾ ವಿಶೇಷ ಕಾಣಲಿಲ್ಲ" ಎನ್ನುತ್ತಾ ನಾನು ಬರುತ್ತಿದ್ದರೆ parking area ದಲ್ಲಿ ಪೇಚಾಟಕ್ಕಿಟ್ಟುಕೊಂಡಿತು. parking ಚೀಟಿ ಕಾರಿನೊಳಗೇ ಉಳಿದಿತ್ತು. ನಿಲ್ಲಿಸಿದ ಜಾಗ ಎಷ್ಟು ಹುಡುಕಿದರೂ ಸಿಗದು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ನೋಡುತ್ತಿದ್ದರೆ ಕೃಷ್ಣ ನಾಪತ್ತೆ. ಅವನಿಗೆ ಫೋನ್ ಮಾಡಿದರೆ ನೆಟ್ ವರ್ಕ್ ಸಿಗದೆ call forward ಆಗಿ ನನ್ನ ಫೋನಿಗೇ ಬಂದು user busy ಎನ್ನುತ್ತಿತ್ತು. ಅಲ್ಲಿದ್ದ ಹಳದಿ ಸಮವಸ್ತ್ರಧಾರಿಯೊಬ್ಬನಲ್ಲಿ ಸಮಸ್ಯೆ ಹೇಳಿ ದಾರಿ ಕೇಳಿದೆವು. ಏನೋ ಒಂದು ಹೇಳಿ ಬೇರೆ ಕಡೆಗೆ ಹೋದ. ಅವನು ಹೇಳಿದ ಕಡೆ ಹೋದರೆ ಹೊರ ಹೋಗುವ ಮಾರ್ಗ ಕಂಡಿತು. ಸಿಟ್ಟು ಬಂದು ಬೈಯಬೇಕೆಸಿತು. ಆದರೆ ಅವನನ್ನೆಲ್ಲಿ ಹುಡುಕುವುದು? ಹತ್ತು ನಿಮಿಷ ಅಲೆದಾಡಿಯಾಗುವಾಗ ಕೃಷ್ಣ ನಡೆಯುತ್ತಿರುವುದು ಕಂಡಿತು. ಅತ್ತ ಓಡಿ ಇನ್ನೊಬ್ಬ ಹಳದಿ ಸಮವಸ್ತ್ರಧಾರಿಯನ್ನು ಸಹಾಯಮಾಡಲು ಕೇಳಿದೆವು. ಆತ ನಾವು ಬಂದ ಸಮಯ, ನಿಲ್ಲಿಸಿದ ಜಾಗದ ಅಕ್ಕ ಪಕ್ಕ ಏನಿತ್ತೆಂದು ಕೇಳಿ ಸರಿ ದಾರಿ ತೋರಿಸಿದ. ಸಧ್ಯ ಕಾರು ಸಿಕ್ಕಿತು. ಹೊರ ಬಂದಾಗ ಗಂಟೆ ಒಂದೂ ಕಾಲು ಆಗಿತ್ತು. ಎಂ. ಎಸ್. ರಾಮಯ್ಯ ತಲುಪಿದಾಗ ಅತ್ತಿಗೆ ಬಹಳ ಹೊತ್ತಿನಿಂದ ಕಾಯುತ್ತಿದ್ದರು. ಮಂತ್ರಿಯ parking areaದ ತಿರುಗಾಟದಲ್ಲಿ ಸಾಕು ಸಾಕಾಗಿತ್ತು. ಅತ್ತಿಗೆಯಲ್ಲಿ "ಮಂತ್ರಿ ಮಾಲ್ ಗೆ ಹೋಗಿದ್ದೆವು... parking lot ಸಿಕ್ಕಾಪಟ್ಟೆ ದೊಡ್ಡದಾಗಿದೆ" ಎಂದೆ.

ಅತ್ತಿಗೆ, ಅಣ್ಣ ಅಲ್ಲಿಂದಲೇ ತಮ್ಮ ಮನೆಗೆ ಹೊರಡಲನುವಾದರು. "ಸ್ವಲ್ಪ urgent ಇದೆ, ದಾರಿಯಲ್ಲಿ ಊಟ ಮಾಡಿಕೊಂಡು ಹೋಗುತ್ತೇವೆ" ಎಂದರು. ನಾನು ಪುನಃ ತರಕಾರಿ, ಪಾತ್ರೆ ಸುಟ್ಟು ಹಾಕುವುದು ಬೇಡವೆಂದೋ ಏನೋ; ಗೊತ್ತಾಗಲಿಲ್ಲ. ನಮಗೆ ನನ್ನ ದೊಡ್ಡಮ್ಮನ ಮನೆಗೆ ಸಾಮಾನೊಂದನ್ನು ತಲುಪಿಸುವ ಕೆಲಸವಿತ್ತು. ಅಲ್ಲೇ ಊಟಕ್ಕೆ ಆಹ್ವಾನವೂ ಇತ್ತು. ಗಡದ್ದಾಗಿ ಬರ್ಫಿ, ದೊಣ್ಣೆ ಮೆಣಸಿನ (capsicum) ಭಾತ್, ಚಪಾತಿ, ಅಲೂ ಮಟರ್, ಅನ್ನ, ಸಾರಿನ ಊಟ ಮಾಡಿ ಮನೆಗೆ ಮರಳಿದೆವು.
-

Thursday, September 16, 2010

"Ladies seat" ನಿಂದ ಚಿಂತನಾಲಹರಿ...

ದಿನವೂ ಬಸ್ಸಿನಲ್ಲಿ ಕನಿಷ್ಟ ಎರಡು ಗಂಟೆ ಪ್ರಯಾಣಿಸುವ ನನ್ನನ್ನು "ಮಹಿಳೆಯರಿಗೆ" ಎಂದು ಬರೆದ ಫಲಕ ಆಗಾಗ ಚಿಂತನೆಗೆ ಹಚ್ಚುತ್ತದೆ. ನಮ್ಮೂರ ಕಡೆ (ದಕ್ಷಿಣ ಕನ್ನಡ) ಖಾಸಗಿ ಬಸ್ಸುಗಳೇ ಹೆಚ್ಚಾಗಿದ್ದು ಅಲ್ಲಿ ಈ Ladies seat ಫಲಕ ಅಷ್ಟಾಗಿ ಪ್ರಾಮುಖ್ಯ ಪಡೆದಿಲ್ಲ. ಕತ್ತಲ ವೇಳೆ ಪ್ರಯಾಣಿಸುತ್ತಿದ್ದಲ್ಲಿ ಅಥವಾ ಬೆರಳೆಣಿಕೆಯಷ್ಟೇ ಮಹಿಳೆಯರಿದ್ದರೆ ಈ ಸೀಟನ್ನು "ಕೇಳಿ ಪಡೆಯುವ" ಪ್ರಯತ್ನ ನಡೆಯುತ್ತದೆ. ಬೆಂಗಳೂರಲ್ಲಿ ಇದಕ್ಕೆ ವಿರುದ್ಧವಾದ ಪದ್ಧತಿ ಇರುವುದರಿಂದ ಮೊದಮೊದಲು ನನಗೆ ವಿಚಿತ್ರವೆನಿಸಿದ್ದು ಸಹಜ.

ಬೆಂಗಳೂರಿನಲ್ಲಿ ನಾನು ನೋಡಿದಂತೆ ಈ ಮಹಿಳಾ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಇವನ್ನು ಅನೇಕ ಮಹಿಳೆಯರು "ಹಕ್ಕು" ಎಂದು ಭಾವಿಸುವುದು ವಿಚಿತ್ರವೆನಿಸುತ್ತದೆ. ಹಲವರು ಸ್ವಲ್ಪವೂ ಸೌಜನ್ಯವಿಲ್ಲದಂತೆ "ಎದ್ದೇಳ್ರೀ... ಲೇಡೀಸ್ ಸೀಟೂ" ಎಂದು ದೊಡ್ಡ ಸ್ವರದಲ್ಲಿ ಹೇಳುವುದನ್ನು ನಾನು ಕೇಳಿದ್ದೇನೆ. ಬೆಂಗಳೂರಿಗೆ ಹೊಸಬಳಾಗಿದ್ದಾಗ ಸೀಟು ಬಿಟ್ಟುಕೊಟ್ಟವರಿಗೆ thanks ಹೇಳಿ ಅಕ್ಕ ಪಕ್ಕದವರಿಂದ ವಿಚಿತ್ರವಾಗಿ ನೋಡಿಸಿಕೊಂಡಿದ್ದೇನೆ. ಎಷ್ಟೋ ಸಲ ವಯಸ್ಸಾದವರನ್ನು, ಮುದುಕರನ್ನು "ಎದ್ದೇಳಿ" ಎಂದು ಚಿಕ್ಕ ಪ್ರಾಯದ, ಕೈ-ಕಾಲು ಗಟ್ಟಿ ಇರುವ ಹೆಂಗಸರು ತಮ್ಮ ಆರಾಮಕ್ಕೋಸ್ಕರ ಎಬ್ಬಿಸುವುದನ್ನು ನೋಡಿ ಮುಜುಗರ ಪಟ್ಟಿದ್ದೇನೆ. ಮಗು ಎತ್ತಿಕೊಂಡವರಿಗೂ ಜಾಗ ಕೊಡದೆ, ಕೆಲವರು ಮಗುವನ್ನು ತಾವೇ ಕೂರಿಸಿಕೊಳ್ಳುವ ಧಾರಾಳತನ ತೋರಿದ್ದನ್ನು ನೋಡಿದ್ದೇನೆ. ಇಷ್ಟೆಲ್ಲ ಆದಮೇಲೆ ನಿಜವಾಗಿ Ladies seat ಮೀಸಲಿಟ್ಟ ಉದ್ದೇಶವೇನು ಎಂಬ ಪ್ರಶ್ನೆ ಆಗಾಗ ಕಾಡಿದೆ. ಇದೇ ಪ್ರಶ್ನೆ ಪುನಃ ಕೇಳಿಕೊಳ್ಳುವ ಪ್ರಸಂಗ ನಿನ್ನೆ ಒದಗಿತು.
ನಾನು ಕೂತಿದ್ದ ಮೀಸಲಾತಿ ಸೀಟಿನ ಹಿಂದೆ ಕುಳಿತ ಸುಮಾರು ಐವತ್ತು ವರ್ಷ ಪ್ರಾಯದ ವ್ಯಕ್ತಿ ನಮ್ಮ ಸೀಟಿನ ನಡುವೆ ಕೈ ತೂರಿಸುವಂತಹ ಕೀಳು ಮಟ್ಟದ ಚೇಷ್ಟೆ ಮಾಡುತ್ತಿದ್ದ. ಎರಡು ಬಾರಿ ಬೈಸಿಕೊಂಡರೂ ಹಲ್ಲು ಕಿರಿತವೇ ಅವನ ಉತ್ತರ! ಮರುಕಳಿಸುವ ಉಪಟಳ! conductor ಸೇರಿದಂತೆ ಒಂದು ನರಪಿಳ್ಳೆಯೂ ಆತನಿಗೆ ಏನೂ ಅನ್ನಲಿಲ್ಲ. Ladies seat ನಲ್ಲಿ ಕೂತರೆ ಹೆಚ್ಚಿನ safety ಅಂತಾರೆಯೇ?

"Ladies" ಬೋರ್ಡ್ ಕಂಡಾಗ ನನ್ನ ಹಳೆಯ ಸಹೋದ್ಯೋಗಿಯೊಡನೆ ನಡೆದ ವಾಗ್ವಾದ ನೆನಪಾಗುತ್ತದೆ. ನಾನು ಸ್ತ್ರೀ ಪುರುಷ ಸಮಾನತೆಯಂತಹ ವಿಷಯಗಳ ಬಗ್ಗೆ ಯಾವತ್ತೂ ಆಸಕ್ತಿ ತೋರಿದ್ದಿಲ್ಲ. ಎಲ್ಲರೂ ಮನುಷ್ಯರು. ಕೆಲವರು ಪ್ರತಿಭಾವಂತರು, ಕೆಲವರು ತೀಕ್ಷ್ಣಮತಿಗಳು. ಕೆಲವರು ಬೇಜವಾಬ್ದಾರರು. ಇನ್ನು ಕೆಲವರು ಬೇಕಾಬಿಟ್ಟಿ ಬದುಕುವವರು. ಈ ಗುಣವಿಶೇಷಣಗಳಿಗೆ ಸ್ತ್ರೀ ಪುರುಷ ಭೇದವಿಲ್ಲ. ಅವಕಾಶ ವಂಚಿತರು, ಶೋಷಿತರು, ಕೆಲಸದ ಹೊರೆ ಹೊತ್ತವರು ಎಲ್ಲರಲ್ಲಿ ಇದ್ದಾರೆ. ಭೇದ ಮಾಡಲು ಇವೇನು ಬೇರೆ ಬೇರೆ ಪಂಗಡಗಳಲ್ಲ. co-operation, co-ordination ನಿಂದ ಬದುಕಬೇಕಾದವರು. ಇದು ನನ್ನ ಅನಿಸಿಕೆ. ಸ್ತ್ರೀ ಪುರುಷರಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಶ್ರೇಷ್ಠ ಎಂಬ ವಾದವನ್ನು ನನಗೆ ಕೇಳಿದರಾಗದು. ಇಂಥದ್ದರಲ್ಲಿ ನನ್ನ ಸಹೋದ್ಯೋಗಿಯೊಬ್ಬರು ವಾದಕ್ಕಿಳಿದರು.
"ಎಲ್ಲರೂ ಸಮಾನರೆಂದು ತಿಳಿಯುವುದಾದರೆ ಬಸ್ ಗಳಲ್ಲಿ Ladies seat ಇರುವುದಕ್ಕೆ ಯಾಕೆ ಪ್ರತಿಭಟಿಸುತ್ತಿಲ್ಲ?"
"ಇಲ್ಲಿ ಸಮಾನತೆಯ ಪ್ರಶ್ನೆಯಿಲ್ಲ. ಬಸ್ ಗಳಲ್ಲಿ ಅಸಭ್ಯವಾಗಿ ವರ್ತಿಸುವ ಕೆಲವು ಮಂದಿ ಇರುತ್ತಾರೆ. ಅದಲ್ಲದೆ ಹೆಚ್ಚಾಗಿ ಮಹಿಳೆಯರಿಗೂ ಪುರುಷರಿಗೂ ಗುಂಪಿನಲ್ಲಿ ನಿಲ್ಲಲು ಅನನುಕೂಲವೆನಿಸುತ್ತದೆ. ಇದು ಅವರವರ ಪ್ರಾಕೃತಿಕ ಸ್ವಭಾವವಿರಬಹುದು. ಅಂತಹ ಸಂದರ್ಭಗಳನ್ನು ಕಡಿಮೆ ಮಾಡಲು ಸೀಟುಗಳನ್ನು ಮೀಸಲಿಟ್ಟಿರಬೇಕು" ಎಂದೆ.
ಆತ ನನ್ನ ವಾದವನ್ನು ಒಪ್ಪಲೇ ಇಲ್ಲವೆನ್ನುವುದು ಬೇರೆ ವಿಚಾರ.
ಅದೇ ಸಹೋದ್ಯೋಗಿಗೆ ಬಸ್ ಗಳಲ್ಲಿ ನಡೆಯುವ ಅಸಭ್ಯ ವರ್ತನೆಗಳನ್ನು ಹೇಳಿದಾಗ "ಮೀಸಲಿಟ್ಟ ಸೀಟು ಬಿಟ್ಟು ಬೇರೆಡೆ ಕೂತರೆ ಇಂತಹವು ಅನಿವಾರ್ಯ" ಎಂಬ ಆಶ್ಚರ್ಯಕರ ಹೇಳಿಕೆಯನ್ನೂ ನೀಡಿದ್ದರು.

ಈ ರೀತಿಯ ಮೀಸಲಾತಿಗಳಿಗೂ ಸಮಾನತೆ ಯಾ ಏಳಿಗೆಗೂ ನನಗೆ ಯಾವ ಸಂಬಂಧವೂ ಕಂಡುಬರುತ್ತಿಲ್ಲ.
Ladies seat ಮೇಲೆ ಹಕ್ಕು ಚಲಾಯಿಸಿದಂತೆ ಇನ್ನೂ ಕೆಲವೆಡೆ ಕೆಲವು ಮಹಿಳೆಯರು advantage ತೆಗೆದುಕೊಳ್ಳುವುದನ್ನು ನಾನ ಕಂಡಿದ್ದೇನೆ. ಊಟಕ್ಕೆ ಕಾದು ನಿಂತ ದೊಡ್ಡ ಸಾಲಿನಲ್ಲಿ "Ladies first" ಎಂದು ನಗುತ್ತಾ ಮುಂದೆ ಸೇರಿಕೊಳ್ಳುವವರನ್ನು ನೋಡಿದ್ದೇನೆ. ಹಸಿವು ಎಲ್ಲರಿಗೂ ಒಂದೇ ಅಲ್ಲವೇ? ಇಂತಹ ಸಂದರ್ಭಗಳನ್ನು ನೋಡಿ ಅನೇಕರು ಈ ನಡತೆಗಳನ್ನು ಸಾರ್ವತ್ರಿಕ ಎಂದು ಪರಿಗಣಿಸುತ್ತಾರೆ. Generalise ಮಾಡುತ್ತಾರೆ. ರಾತ್ರಿ ತಡವಾಗಿ ಆಫೀಸು ಬಿಡಲು ಬಯಸದ ಮಹಿಳೆಯರನ್ನು, ಬಸ್ ಗಳಲ್ಲಿ ಕಿರುಕುಳ ಅನುಭವಿಸುವವರನ್ನು ಸಮಾನತೆ, ಮೀಸಲಾತಿಗಳ ನೆಲೆಯಲ್ಲಿ ಪ್ರಶ್ನಿಸುತ್ತಾರೆ. biological differences ಅನ್ನು, ಅದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಸಮಾನತೆ ನಿರ್ಧರಿಸುವಲ್ಲಿ ಗಣನೆಗೆ ತೆಗೆದುಕೊಳ್ಳಬಾರದು. ಇಲ್ಲಿ ಬದಲಾಗಬೇಕಿರುವುದು ಜನರ (ಮಹಿಳೆಯರೂ ಸೇರಿದಂತೆ) ದೃಷ್ಟಿಕೋನ. ಅಲ್ಲಿವರೆಗೆ Ladies seat ಆಗಲೀ ಮೀಸಲಾತಿ ಇರುವ ಯಾವುದೇ ಕ್ಷೇತ್ರವಾಗಲೀ ಏನನ್ನೂ ಬದಲಾಯಿಸಲು ಸಾಧ್ಯವಿಲ್ಲ.
-